ಕೊಪ್ಪಳ: ಜಿಲ್ಲೆಯ ಗಂಗಾವತಿಯಲ್ಲಿ ಅಖಿಲ ಭಾರತ 78ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದು ಭಾನುವಾರಕ್ಕೆ (ಡಿ. 9) ಒಂದು ವರ್ಷ ಆಯಿತು. ಆದರೆ ಅಕ್ಷರ ಜಾತ್ರೆಗೆ ಸಾಕ್ಷಿಯಾಗಿದ್ದ, ಲಕ್ಷಾಂತರ ಸಾಹಿತ್ಯಾಸಕ್ತರು ಕುತೂಹಲದಿಂದ ಕಾಯುತ್ತಿರುವ ಸ್ಮರಣ ಸಂಚಿಕೆ ಮಾತ್ರ ಇನ್ನೂ ಹೊರಗೆ ಬಂದಿಲ್ಲ! ಸಮ್ಮೇಳನದ ಸಂದರ್ಭದಲ್ಲಿ ಸಾಂಕೇತಿಕವಾಗಿ ಸ್ಮರಣ ಸಂಚಿಕೆಯ ಮುಖಪುಟವನ್ನು ಮಾತ್ರ ಬಿಡುಗಡೆ ಮಾಡಲಾಗಿತ್ತು.
ಬೆಂಗಳೂರು ಮೂಲದ `ಎಫ್-5 ಇವೆಂಟ್ಸ್' ಎಂಬ ಸಂಸ್ಥೆ 5 ಲಕ್ಷ ರೂಪಾಯಿಗಳಿಗೆ ಸ್ಮರಣ ಸಂಚಿಕೆಯನ್ನು ಮುದ್ರಿಸುವ ಟೆಂಡರ್ ಪಡೆದುಕೊಂಡಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ. `ಹಲವಾರು ಕಾರಣಗಳಿಂದಾಗಿ ಸ್ಮರಣ ಸಂಚಿಕೆ ಹೊರ ಬರಲು ವಿಳಂಬವಾಗಿದೆ. ಮುದ್ರಿಸಲು ಟೆಂಡರ್ ಪಡೆದುಕೊಂಡಿರುವ ಸಂಸ್ಥೆಗೆ ಇಂತಹ ಕಾರ್ಯದಲ್ಲಿ ಅನುಭವ ಇಲ್ಲ. ಇದು ವಿಳಂಬಕ್ಕೆ ಪ್ರಮುಖ ಕಾರಣ' ಎಂಬುದು ಸಂಚಿಕೆಯ ಸಂಪಾದಕ ಮಂಡಳಿ ಮುಖ್ಯಸ್ಥ ಡಾ.ಶರಣಬಸಪ್ಪ ಕೋಲ್ಕಾರ್ ಅವರ ಪ್ರತಿಪಾದನೆ.
`ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಅವರು `ಕಳವೆ' ಎಂಬ ಹೆಸರಿನಲ್ಲಿ ಸ್ಮರಣ ಸಂಚಿಕೆ ಮುದ್ರಣದ ಟೆಂಡರ್ ಆಗಿದೆ. ಆದರೆ, ಇಂತಹ ಮಹತ್ವಪೂರ್ಣ ಸಂಚಿಕೆಯನ್ನು ಮುದ್ರಿಸಲು ಬೇಕಾದ ಅನುಭವ ಆ ಸಂಸ್ಥೆಗೆ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕಿತ್ತು . ಸಮ್ಮೇಳನ ಸಂದರ್ಭದಲ್ಲಿ ಮುಖಪುಟವನ್ನು ಮಾತ್ರ ಬಿಡುಗಡೆ ಮಾಡಲಾಯಿತು. ಸಮ್ಮೇಳನದ ಎಲ್ಲ ಭಾವಚಿತ್ರಗಳನ್ನು ಬಳಸಿಕೊಳ್ಳಬೇಕು ಎಂಬ ನಿರ್ಧಾರವನ್ನು ಕೈಗೊಳ್ಳಲಾಯಿತು.
ಅಲ್ಲದೇ, ಲೇಖನಗಳು ಸಂಪಾದಕ ಮಂಡಳಿಯ ಕೈಸೇರಲು ಸಾಕಷ್ಟು ಸಮಯ ಹಿಡಿಯಿತು. ಈ ಎಲ್ಲ ಕಾರಣಗಳಿಂದಾಗಿಯೂ ಸಂಚಿಕೆ ಹೊರ ಬರಲು ವಿಳಂಬವಾಗುತ್ತಿದೆ ಎಂದು ಸಮಜಾಯಿಷಿ ನೀಡುತ್ತಾರೆ. `ಸ್ಮರಣ ಸಂಚಿಕೆಯ ಕರಡು ಪ್ರತಿ ಕರಡು ತಿದ್ದುವ ಮಂಡಳಿಯ ಸದಸ್ಯರು ಈಗ ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿದ್ದಾರೆ. ಆದರೆ, ಸ್ಮರಣ ಸಂಚಿಕೆ ಮುದ್ರಣ ಯಾವಾಗ ಪೂರ್ಣಗೊಳ್ಳುತ್ತದೆ ಎಂಬುದನ್ನು ಸಂಪಾದಕ ಮಂಡಳಿಯೇ ಸ್ಪಷ್ಟಪಡಿಸಬೇಕು' ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.