ಮಾಗಡಿ: ಸತ್ಯಶುದ್ಧ ಕಾಯಕದಿಂದಲೇ ದೇವರನ್ನು ಕಾಣುವಂತಾಗಬೇಕು ಎಂದು ಗುಮ್ಮಸಂದ್ರ ರುದ್ರಮುನೇಶ್ವರ ಮಠದ ಚಂದ್ರಶೇಖರ ಸ್ವಾಮಿ ತಿಳಿಸಿದರು.
ಭಾರ್ಗಾವತಿ ಕೆರೆಯ ಕೋಡಿ ಮಠದಲ್ಲಿನ ಮುನೇಶ್ವರ ಮತ್ತು ಶನೇಶ್ವರ ಸ್ವಾಮಿ ದೀಪೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೇಲುಕೀಳು ಮಾಡದೆ ಎಲ್ಲವೂ ನಮಗೆ ಬೇಕು ಎಂಬ ಆಸೆ ಇಟ್ಟುಕೊಳ್ಳದೇ, ಹಂಚಿ ತಿನ್ನುವುದರಿಂದ ದೇವರ ಒಲುಮೆ ಗಳಿಸಬಹುದು ಎಂದರು.
‘ದೀಪೋತ್ಸವವು ಸರ್ವರ ಬಾಳಿನಲ್ಲಿ ನಲ್ಮೆಯ ಬೆಳಕು ನೀಡಲಿ. ಆಧುನಿಕ ಯುಗದಲ್ಲಿ ವಿಜ್ಞಾನವನ್ನು ನಂಬಬೇಕು. ದೇವರ ಮುಂದೆ ಬಡವ, ಬಲ್ಲಿದ ಎಂಬ ಭಿನ್ನತೆ ಇಲ್ಲ. ಎಲ್ಲರೂ ಒಂದೆ ಎಂಬ ಭಾವನೆ ನಮಗೆ ಬರಬೇಕು’ ಎಂದರು.
ದೀಪದಿಂದ ಇನ್ನೊಂದು ದೀಪ ಹಚ್ಚಿ ಕತ್ತಲೆಯನ್ನು ದೂರ ಮಾಡುವುದರಲ್ಲಿ ಆನಂದವಿದೆ ಎಂದು ಜಡೆದೇವರ ಮಠದ ಇಮ್ಮಡಿ ಬಸವರಾಜ ಸ್ವಾಮಿ ಅಭಿಪ್ರಾಯಪಟ್ಟರು.
ಹಿರಿಯ ಪೈಲ್ವಾನ್ ತಿರುಮಲೆ ಚಿನ್ನಪ್ಪ ಮಾತನಾಡಿ, ಇಮ್ಮಡಿ ಕೆಂಪೇಗೌಡ ತನ್ನ ರಾಣಿ ಉಡುವೆಗೆರೆ ಭಾರ್ಗಾವತಿ ಸವಿನೆನಪಿಗಾಗಿ ನಿರ್ಮಿಸಿರುವ ಭಾರ್ಗಾವರಿ ಕೆರೆ ಕಲುಷಿತವಾಗಿ ಒತ್ತುವರಿಯಾಗದಂತೆ ತಡೆಗಟ್ಟಬೇಕು ಎಂದರು.
ಚೋಳರ ರಾಜೇಂದ್ರ ಚೋಳ ನಿರ್ಮಿಸಿ, ಇಂದು ವಿನಾಶದತ್ತ ಸಾಗಿರುವ ಕೋಡಿ ಮಲ್ಲೇಶ್ವರ ಸ್ವಾಮಿ ದೇಗುಲ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳ ಬೇಕಿದೆ ಎಂದು ಸಲಹೆ ನೀಡಿದರು.
ಶಾಸಕ ಎಚ್.ಸಿ.ಬಾಲಕೃಷ್ಣ ಭೇಟಿ ನೀಡಿ ಪೂಜೆ ಸಲ್ಲಿಸಿದರು. ದೇಗುಲದ ಅರ್ಚಕ ಟಿ.ಆರ್.ಮಾರಪ್ಪ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು.
ಮುಖಂಡರಾದ ಪಿ.ವಿ.ಶಾಂತರಾಜು, ಆರಾಧ್ಯ, ನಾಗರಾಜು, ದಶರಥ, ಶಿವಣ್ಣ, ಮಲವರ ಪಾಲ್ಯದ ಬೀರೇದೇವರ ಪೂಜಾರಿ ಮಲವಯ್ಯ ಇದ್ದರು. ಕೋಡಿಮಲ್ಲೇಶ್ವರ ಸ್ವಾಮಿ ದೇಗುಲದ ಆವರಣದಲ್ಲಿ ಸಾಮೂಹಿಕ ಹೋಳಿಗೆ ಊಟ ಏರ್ಪಡಿಸಲಾಗಿತ್ತು. ದೇವರ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಭಕ್ತರು ಎಣ್ಣೆ ಸುರಿದು ದೀಪ ಬೆಳಗಿಸಿ ಭಕ್ತಿ ಸಮರ್ಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.