ADVERTISEMENT

ವಿಶ್ವನುಡಿಸಿರಿಗೆ ಬರಗೂರು ‘ಬಂಡಾಯ’

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 19:30 IST
Last Updated 20 ಡಿಸೆಂಬರ್ 2013, 19:30 IST

ಮೂಡುಬಿದರೆ: ‘ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‌­ನಲ್ಲಿ ಕೋಟಿಗಟ್ಟಲೆ ಸಂಪತ್ತಿನ ವೈಭವೀಕರಣ ಮನಸ್ಸಿಗೆ ತೀರಾ ಕಿರಿಕಿರಿ ಉಂಟು ಮಾಡಿದೆ. ಸಂಪತ್ತಿನ ವಿಜೃಂಭಣೆಯಿಂದ ವಿವೇಕ ನಾಶವಾಗಿ ವಿಕಾರತೆಯೇ ಮುನ್ನೆಲೆಗೆ ಬರುತ್ತದೆ. ಆದ್ದರಿಂದ ಉಪನ್ಯಾಸ ಕಾರ್ಯಕ್ರಮ­ದಲ್ಲಿ ನಾನು ಭಾಗವ ಹಿಸು­ತ್ತಿಲ್ಲ’ ಎಂದು ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿ ದ್ದಾರೆ.

ಶುಕ್ರವಾರ ಮಧ್ಯಾಹ್ನ 3.10ಕ್ಕೆ ‘ಸಮಾಜ’ ಎಂಬ ವಿಷಯದ ಬಗ್ಗೆ ಉಪನ್ಯಾಸ ಮಾಡಬೇಕಿದ್ದ ಬರಗೂರು ಗೈರು ಹಾಜರಾಗಿದ್ದರು. ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ, ‘ನಾನು ನುಡಿಸಿರಿಯ ಮೊದಲನೇ ಅಧ್ಯಕ್ಷ ನಾಗಿದ್ದೆ. ನನ್ನ ವಿಚಾರಗಳನ್ನು ಅಲ್ಲಿ ಮಂಡಿಸಿದ್ದು, ಆ ಬಗ್ಗೆ ಅಲ್ಲಿ ಸಾಕಷ್ಟು ಚರ್ಚೆಗಳೂ ಆಗಿವೆ.

ಆದರೆ ಈ ಬಾರಿ ಸಾಹಿತ್ಯದ ಮೂಲ ಆಶಯಕ್ಕೆ ನುಡಿಸಿರಿ ಧಕ್ಕೆ ತಂದಿದೆ. ಈ ವರ್ಷದ ಕಾರ್ಯ ಕ್ರಮದಲ್ಲಿ ಜನಪರ ವಿಚಾರಗಳಿಗೆ ಯಾವುದೇ ಅವಕಾಶ ಇಲ್ಲ ಎನಿಸಿ ಹೊರಟು ಬಿಟ್ಟೆ. ಉದ್ಘಾಟನೆ ಸಂದರ್ಭದಲ್ಲಿ ಅಧ್ಯಕ್ಷರ ಪರವಾಗಿ ಮಾತನಾಡುವ ಅವಕಾಶ ನೀಡಿದ್ದರೆ ನನ್ನ ವಿಚಾರಗಳನ್ನು ಅಲ್ಲಿಯೇ ಸ್ಪಷ್ಟಪಡಿಸುವ ಉದ್ದೇಶ ನನಗೆ ಇತ್ತು’ ಎಂದು ಹೇಳಿದರು.

ಆದರೆ, ಗುರುವಾರ ಸಮ್ಮೇಳನ ದಲ್ಲಿ ನಡೆದ ನುಡಿಸಿರಿಗಳ ಪೂರ್ವಾ ಧ್ಯಕ್ಷರ ಸನ್ಮಾನ ಕಾರ್ಯಕ್ರಮದಲ್ಲಿ ಬರಗೂರು ಅವರು ಭಾಗವಹಿಸಿದ್ದೇ ಅಲ್ಲದೆ ಸನ್ಮಾನವನ್ನೂ ಸ್ವೀಕರಿಸಿದ್ದರು.

ಇಷ್ಟು ವರ್ಷದ ನುಡಿಸಿರಿಯಲ್ಲಿ ವೀರೇಂದ್ರ ಹೆಗ್ಗಡೆಯಂತಹವರು ಸಭೆಗಳಲ್ಲಿ ಕುಳಿತು ಆಲಿಸುವ, ಭಾಗವ ಹಿಸುವ ಕ್ರಿಯೆಯಷ್ಟೆ ಮಾಡುತ್ತಿದ್ದರು. ಈ ಬಾರಿ ಸೌಜನ್ಯಾ ಪ್ರಕರಣ ಇಷ್ಟೊಂದು ಸುದ್ದಿ ಮಾಡಿದ್ದರೂ ಅವರ ಭಾಗವಹಿಸುವಿಕೆಯನ್ನು ಅತಿಯಾಗಿ ಮಾಡಿಕೊಳ್ಳಲಾಗಿದೆ. ಮಾತಿಗೆ ಅವಕಾಶ ಸಿಕ್ಕಿದ್ದರೆ ದಕ್ಷಿಣ ಕನ್ನಡದಲ್ಲಿ ನಡೆದ ಕೊಲೆ ಅತ್ಯಾಚಾರ ಪ್ರಕರಣಗಳನ್ನು ಸ್ಪಷ್ಟವಾಗಿ ಉಲ್ಲೇಖಿಸುವ ಇರಾದೆ ತಮಗೆ ಇತ್ತು ಎಂದು ಬರಗೂರು ವಿವರಿಸಿದರು.

ನಾಟಕ ತಂಡದ ಬಂಡಾಯ: ಪ್ರಗತಿಪರ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಳ್ಳಲು ಬಯಸಿದ್ದ ಕೆಲವು ಸಾಹಿತಿಗಳು ಈ ಬಾರಿ ನುಡಿಸಿರಿಯಿಂದ ದೂರ ಉಳಿದಿದ್ದಾರೆ. ಸಮುದಾಯ ರಂಗ ತಂಡದಿಂದ ಶನಿವಾರ ರಾತ್ರಿ ನುಡಿಸಿರಿಯಲ್ಲಿ ನಡೆಯಬೇಕಿದ್ದ ‘ತುಘಲಕ್’ ನಾಟಕವನ್ನು ಪ್ರಸ್ತುತ ಪಡಿಸದೇ ಇರಲು ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.