ADVERTISEMENT

ಹುಬ್ಬಳ್ಳಿ ಬೆಂಗೇರಿ ಸಂತೆ ಮೈದಾನದಲ್ಲಿ ಕಸ ವಿಲೇವಾರಿ ಘಟಕ:ವ್ಯಾಪಾರಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2018, 8:12 IST
Last Updated 15 ಡಿಸೆಂಬರ್ 2018, 8:12 IST
   

ಹುಬ್ಬಳ್ಳಿ: ಇಲ್ಲಿನ ಬೆಂಗೇರಿ ಸಂತೆ ಮೈದಾನದಲ್ಲಿ ಕಸ ವಿಲೇವಾರಿ ಘಟಕ ಆರಂಭಿಸುವುದನ್ನು ವಿರೋಧಿಸಿ ಸ್ಥಳೀಯರು ಹಾಗೂ ವ್ಯಾಪಾರಿಗಳು ಶನಿವಾರ ಪ್ರತಿಭಟನೆ ನಡೆಸಿದರು.

ಕಸ ವಿಲೇವಾರಿ ಘಟಕ ಆರಂಭಿಸಿದರೆ ದುರ್ವಾಸನೆಯಿಂದಾಗಿ ವ್ಯಾಪಾರ ಮಾಡಲು ಸಾಧ್ಯವಾಗುವುದಿಲ್ಲ. ಜನರು ಸಹ ಇಲ್ಲಿಗೆ ಬರಲು ಹಿಂದೇಟು ಹಾಕುತ್ತಾರೆ. ಆದ್ದರಿಂದ ಯಾವುದೇ ಕಾರಣಕ್ಕೂ ಕಸ ವಿಲೇವಾರಿ ಘಟಕ ಆರಂಭಿಸಬಾರದು ಎಂದು ಆಗ್ರಹಿಸಿದರು.

ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಗನಿ ವಲಿ ಅಹಮ್ಮದ್ ಮಾತನಾಡಿ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸ್ಥಳೀಯ ಜನರಿಗೆ ಯಾವುದೇ ಮಾಹಿತಿ ನೀಡದೆ ಈ ಘಟಕ ಆರಂಭಿಸಲು ಮುಂದಾಗಿರುವುದು ಸರಿಯಲ್ಲ. ಜನ ವಸತಿ ಇರುವ ಇಲ್ಲಿ ಕಸ ವಿಲೇವಾರಿ ಘಟಕ ಆರಂಭಿಸುವುದು ನಿಯಮ ಬಾಹಿರವಾಗಿದೆ ಎಂದರು.

ADVERTISEMENT

ಇದು ಹಲವು ಬಡಾವಣೆಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯೂ ಆಗಿರುವುದರಿಂದ ಕಸ ವಿಲೇವಾರಿ ಘಟಕ ಆರಂಭವಾದರೆ ದಟ್ಟಣೆ ಹೆಚ್ಚಾಗಲಿದೆ ಎಂದರು.

ಎಐಟಿಯುಸಿ ಕಾರ್ಯದರ್ಶಿ ಪೀರಜಾದೆ ಮಾತನಾಡಿ, ಶಾಲೆಯೂ ಸಮೀಪದಲ್ಲಿ ಇರುವುದರಿಂದ ಮಕ್ಕಳ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದರು.

ಯಾವುದೇ ಕಾರಣಕ್ಕೂ ಇಲ್ಲಿ ಕಸ ವಿಲೇವಾರಿ ಘಟಕ ಆರಂಭಿಸಲು ಅವಕಾಶ ನೀಡುವುದಿಲ್ಲ ಎಂದು ಸಂತೆ ವ್ಯಾಪಾರಿಗಳಾದ ಹುಲಿಗೆಮ್ಮ ಚಲವಾದಿ, ಲಕ್ಷ್ಮಿ ಬಾರಕೇರ ಹೇಳಿದರು.

ಕೈಮುಗಿದು ಏರು ಇದು ಕನ್ನಡದ ತೇರು ಆಟೊ ಚಾಲಕರ ಸಂಘಟನೆಯ ನಿಂಗಪ್ಪಣ್ಣ, ಸೂರ್ಯನಗರ ವೆಲ್ಫೇರ್ ಅಸೋಸಿಯೇಷನ್ ನ ಬಾಬುರಾವ್ ತಾಡೆ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಕಲ್ಲದರ ಮುಲ್ಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.