ADVERTISEMENT

ಶಂಕರ ಭಟ್‌ಗೆ ಪಂಪ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 20 ಜನವರಿ 2014, 19:30 IST
Last Updated 20 ಜನವರಿ 2014, 19:30 IST

ಸಾಗರ: ‘ಮನಸ್ಸಿನ ಮಾತುಗಳಿಗೆ ಭಾಷೆ­ಯನ್ನು ಕನ್ನಡಿಯಂತೆ ಬಳಸುವ ಮೂಲಕ ಡಾ.ಡಿ.ಎನ್.ಶಂಕರ ಭಟ್‌ ಅವರು ಕನ್ನಡ ಭಾಷಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಉಮಾಶ್ರೀ ಹೇಳಿದರು.

ತಾಲ್ಲೂಕಿನ ಮುಂಗರವಳ್ಳಿ ಗ್ರಾಮ­ದಲ್ಲಿ ಸೋಮವಾರ ನಡೆದ ಕಾರ್ಯ­ಕ್ರಮ­ದಲ್ಲಿ ಭಾಷಾ ಶಾಸ್ತ್ರಜ್ಞ ಡಾ.ಡಿ.ಎನ್.­ಶಂಕರಭಟ್‌ ಅವರಿಗೆ 2012ನೇ ಸಾಲಿನ ‘ಪಂಪ ಪ್ರಶಸ್ತಿ’ ನೀಡಿ ಅವರು ಮಾತನಾಡಿದರು.

‘ಪ್ರಶಸ್ತಿ ಶಿಫಾರಸ್ಸುಗಳ ಮೂಲಕ ಬರುವಂತದ್ದಲ್ಲ. ಸದ್ದು ಗದ್ದಲವಿಲ್ಲದೆ ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿ­ರುವ ವ್ಯಕ್ತಿಗಳನ್ನು ಪ್ರಶಸ್ತಿ ಪುರಸ್ಕಾರ­ಗಳು ಹುಡುಕಿಕೊಂಡು ಬರಬೇಕು. ಶಂಕರ ಭಟ್‌ ಅವರು ಯಾವುದೇ ಪ್ರತಿ­ಫಲದ ನಿರೀಕ್ಷೆ ಇಲ್ಲದೆ ಮಾಡುತ್ತಿರುವ ಕೆಲಸಕ್ಕೆ ಪ್ರಶಸ್ತಿ ದೊರಕಿದ್ದು ಅದಕ್ಕೆ ಅವರು ಸಂಪೂರ್ಣವಾಗಿ ಅರ್ಹರಾಗಿ­ದ್ದಾರೆ’ ಎಂದರು.

‘ಕನ್ನಡ ಭಾಷೆಯ ಬಗ್ಗೆ ಕೆಲಸ ಮಾಡು­ತ್ತಿರುವ ಎಲ್ಲಾ ವ್ಯಕ್ತಿಗಳ ಬಗ್ಗೆ ಸರ್ಕಾರಕ್ಕೆ ವಿಶೇಷವಾದ ಪ್ರೀತಿ ಇದೆ. ಬನವಾಸಿ­ಯಲ್ಲಿ ನಡೆದ ಕದಂಬ ಉತ್ಸವ­ದಲ್ಲಿ ಶಂಕರ ಭಟ್‌ ಅವರು ಪ್ರಶಸ್ತಿ ಸ್ವೀಕರಿಸಲು ಬಾರದೆ ಇದ್ದುದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನಸ್ಸಿಗೆ ನೋವಾಗಿತ್ತು. ಅವರ ಸೂಚನೆ ಮೇರೆಗೆ ಭಟ್‌ ಅವರ ಮನೆಗೆ ಬಂದು ಪ್ರಶಸ್ತಿ ಪ್ರದಾನ ಮಾಡು­ತ್ತಿರುವೆ’ ಎಂದರು.

ಸಾಹಿತಿ ಡಾ.ನಾ.ಡಿಸೋಜ ಮಾತ­ನಾಡಿ, ‘ಭಾಷೆಯನ್ನು ತಮ್ಮ ಅಧ್ಯಯ­ನದ ವಸ್ತುವಾಗಿ ಇಟ್ಟುಕೊಂಡು ಕೆಲಸ ಮಾಡುತ್ತಿರುವ ಶಂಕರ ಭಟ್‌ ಅವರು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಿದ್ದಾರೆ’ ಎಂದರು.

ರಂಗಕರ್ಮಿ ಕೆ.ವಿ.ಅಕ್ಷರ ಮಾತನಾಡಿ ‘ಶಂಕರ ಭಟ್‌ ಅವರ ಶೈಕ್ಷಣಿಕ ಸಾಧನೆ­ಗಳು ಎಷ್ಟು ಮುಖ್ಯವೋ ಅವರ ಋಷಿ ಸದೃಶ್ಯ ವ್ಯಕ್ತಿತ್ವ ಕೂಡ ಅಷ್ಟೆ ಮುಖ್ಯ­ವಾದದ್ದು. ಅವರು ಯಾವತ್ತೂ ಧರ್ಮ ಅಥವಾ ನೀತಿಯ ಬಗ್ಗೆ ಬರವ­ಣಿಗೆ ಮಾಡಿಲ್ಲ’ ಎಂದು ಹೇಳಿದರು.

‘ಬನವಾಸಿಯಲ್ಲಿ ನಡೆದ ಕದಂಬ ಉತ್ಸವದಲ್ಲಿ ಪ್ರಶಸ್ತಿ ಸ್ವೀಕರಿಸಲು ಶಂಕರ ಭಟ್‌ ಅವರು ನಿರಾಕರಿಸಿದ್ದು ಕೂಡ ಮಹತ್ವಪೂರ್ಣ ಸಂಗತಿ. ತಾನಿ­ರುವ ನೆಲವೆ ಬನವಾಸಿ ಎಂದು ಭಾವಿ­ಸು­ವಂತೆ ಪಂಪ ಹೇಳಿದ್ದ ಮಾತನ್ನು ಸಾಕ್ಷೀಕರಿಸುವ ರೀತಿಯಲ್ಲಿ ಅವರ ನಿರಾಕರಣೆ ಇದೆ’ ಎಂದರು. ಸಮಾ­ರಂಭ­ದಲ್ಲಿ ಶಂಕರ ಭಟ್‌ ಅವರ ಪತ್ನಿ ಭಾರತಿ ಭಟ್‌ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.