ವಿಜಯಪುರ: ಲಿಂಗಾಯತ ಪ್ರತ್ಯೇಕ ಧರ್ಮದ ಬೆಂಬಲಕ್ಕೆ ಮಠಾಧೀಶರನ್ನು ಸೆಳೆಯಲು, ಕೆಲ ಮಠಾಧೀಶರಿಗೆ ಹಣ, ಕಾರು ಕೊಡಲಾಗಿದೆ ಎಂದು ಹೇಳಿಕೆ ನೀಡಿರುವ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ಮತಿಭ್ರಮಣೆಯಾಗಿದೆ ಎಂದು ಲಿಂಗಾಯತ ಸ್ವತಂತ್ರ ಧರ್ಮದ 99 ಉಪ ಪಂಗಡಗಳ ಒಕ್ಕೂಟದ ಪ್ರಮುಖರು ಟೀಕಿಸಿದ್ದಾರೆ.
‘ಶಾಮನೂರು ಅವರು ಆರೋಪವನ್ನು ಸಾಬಿತುಪಡಿಸಬೇಕು. ಇಲ್ಲದಿದ್ದರೆ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಸ್ವಾಮೀಜಿಯವರ ಕ್ಷಮೆ ಯಾಚಿಸಬೇಕು’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
‘ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. 80 ವರ್ಷ ದಾಟಿದ ಈ ವಯೋವೃದ್ಧರು ಇನ್ನೂ ಅಧಿಕಾರದ ಆಸೆ ಬಿಟ್ಟಿಲ್ಲ. ಇವರೇ ಕೆಲ ಸ್ವಾಮೀಜಿಗಳನ್ನು ತಿಂಗಳ ಬಾಡಿಗೆಗೆ ಇಟ್ಟುಕೊಂಡಿದ್ದಾರೆ’ ಎಂದು ಅಖಿಲ ಭಾರತ ವೀರಶೈವ ಮಹಾಸಭೆಯ ರಾಜ್ಯ ಯುವ ಉಪಾಧ್ಯಕ್ಷ ಸಂಗಮೇಶ ಬಬಲೇಶ್ವರ, ಬೆಳಗಾವಿಯ ಶಂಕರ ಗುಡಸ, ಸಿಂದಗಿಯ ವಿಠ್ಠಲ ಕೋಳೂರು, ಕಲಬುರ್ಗಿಯ ಭೀಮನಗೌಡ ಪರಗೊಂಡ, ಧಾರವಾಡದ ರಾಜಣ್ಣ ಮರಳಪ್ಪನವರ, ಬೀಳಗಿಯ ಮಲ್ಲಿಕಾರ್ಜುನ ಕೊಟಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.