ADVERTISEMENT

ಶಾಸಕರ ಸಹಿ ಸಂಗ್ರಹ ಯಡಿಯೂರಪ್ಪ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2012, 19:30 IST
Last Updated 4 ಫೆಬ್ರುವರಿ 2012, 19:30 IST

ಹುಬ್ಬಳ್ಳಿ: ತಮ್ಮ ಪರವಾಗಿ ಯಾವುದೇ ಶಾಸಕರು ಸಹಿ ಸಂಗ್ರಹ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಕೆರೂರದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಭಾಗವಹಿಸಲು ಶನಿವಾರ ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ಯಡಿಯೂರಪ್ಪ ಪರವಾಗಿ ಬೆಂಗಳೂರಿನಲ್ಲಿ ಶಾಸಕರು ಸಹಿ ಸಂಗ್ರಹ ಮಾಡುತ್ತಿದ್ದಾರೆ ಎಂಬ ವದಂತಿಯ ಬಗ್ಗೆ ಗಮನ ಸೆಳೆದಾಗ, ಅಂಥ ಯಾವುದೇ ಪ್ರಕ್ರಿಯೆ ನಡೆಯುತ್ತಿಲ್ಲ ಎಂದು ಹೇಳಿದ ಅವರು, ಶುಕ್ರವಾರ ದಿಢೀರ್ ನವದೆಹಲಿಗೆ ತೆರಳಿದ್ದರಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ. ತಮ್ಮ ವಿರುದ್ಧದ ಪ್ರಕರಣಗಳಿಗೆ ಸಂಬಂಧಿಸಿ ವಕೀಲರೊಂದಿಗೆ ಚರ್ಚಿಸಲು ತೆರಳಿದ್ದೆ ಎಂದು ಹೇಳಿದರು.

`ವರಿಷ್ಠರೊಂದಿಗೆ ಚರ್ಚಿಸಲು ನವದೆಹಲಿಗೆ ಹೋಗಿದ್ದೇನೆ ಎಂಬುದು ಕೇವಲ ವದಂತಿ. ಪಕ್ಷದ ವರಿಷ್ಠರು ಈಗ ಉತ್ತರ ಭಾರತದ ರಾಜ್ಯಗಳಲ್ಲಿ ನಡೆಯುತ್ತಿರುವ ಚುನಾವಣೆಯ ಪ್ರಚಾರದಲ್ಲಿದ್ದಾರೆ. ಹೀಗಿರುವಾಗ ಅವರನ್ನು ಮಾತನಾಡಿಸಲು ಹೋಗುವುದು ಎಲ್ಲಿ ಬಂತು~ ಎಂದು ಅವರು ಪ್ರಶ್ನಿಸಿದರು.

`ನನಗೆ ಸೂಕ್ತ ಸ್ಥಾನ ನೀಡುವ ವಿಚಾರವನ್ನು ವರಿಷ್ಠರು ನಿರ್ಧರಿಸುತ್ತಾರೆ. ಸರಿಯಾದ ಸಮಯದಲ್ಲಿ ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಭರವಸೆ ಇದೆ. ಹೀಗಾಗಿ ಸ್ಥಾನಮಾನಕ್ಕಾಗಿ ಯಾರನ್ನೂ ಭೇಟಿಯಾಗಿ ಒತ್ತಡ ಹೇರಲಿಲ್ಲ~ ಎಂದು ಯಡಿಯೂರಪ್ಪ ಹೇಳಿದರು.

`ಕೇಂದ್ರ ಸರ್ಕಾರ ಶೀಘ್ರ ಪತನವಾಗಲಿದ್ದು ಇದರ ಬೆನ್ನಲ್ಲೇ ಮಧ್ಯಂತರ ಚುನಾವಣೆ ನಡೆಯಲಿದೆ~ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.