ADVERTISEMENT

ಶಿಕ್ಷಕರ ಹುದ್ದೆ ಪರಿವರ್ತನೆ ಪ್ರಕರಣ: ತಪ್ಪಿತಸ್ಥರ ರಕ್ಷಣೆ ಶಂಕೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST

ಕೊಪ್ಪಳ:  ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರ ಹುದ್ದೆಗಳನ್ನು ಪರಿವರ್ತನೆ ಮಾಡಿದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕಳೆದ ವರ್ಷವೇ ಸಾರ್ವಜನಿಕ ಶಿಕ್ಷಣ ಇಲಾಖೆಯು ಹಿರಿಯ ಅಧಿಕಾರಿಯೊಬ್ಬರಿಂದ ತನಿಖೆ ನಡೆದಿದೆ. ಆದರೆ, ವರದಿಯನ್ವಯ ಇದುವರೆಗೂ ತಪ್ಪಿತಸ್ಥರ ವಿರುದ್ಧ ಇಲಾಖೆಯ ಗುಲ್ಬರ್ಗ ಪ್ರಾದೇಶಿಕ ಆಯುಕ್ತರ ಕಚೇರಿ ಕ್ರಮ ಕೈಗೊಳ್ಳದೇ ಇರುವುದು ಬೆಳಕಿಗೆ ಬಂದಿದೆ.

ಹುದ್ದೆಗಳ ಪರಿವರ್ತನೆ ಕುರಿತಂತೆ ಇಲಾಖೆಯ ಬೆಂಗಳೂರು ವಿಭಾಗದ ಸಹ ನಿರ್ದೇಶಕ ವೈ.ಟಿ.ಗುರುಮೂರ್ತಿ ನೇತೃತ್ವದ ತಂಡ ತನಿಖೆ ನಡೆಸಿ, 15.12.2010ರಂದು ವರದಿಯನ್ನು ಸಲ್ಲಿಸಿದೆ. ವರದಿಯನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಲಾಖೆಯ ನಿರ್ದೇಶಕ (ಆಡಳಿತ) ಕೆ.ಪಿ.ಹನುಮಂತರಾಯಪ್ಪ ಗುಲ್ಬರ್ಗದ ಇಲಾಖೆಯ ಹೆಚ್ಚುವರಿ ಆಯುಕ್ತರಿಗೆ 17.2.2011ರಂದು ಪತ್ರ ಬರೆದು ಸೂಚಿಸಿದ್ದರು. ಇದುವರೆಗೂ ಕ್ರಮ ಜರುಗಿಸದೇ ಇರುವುದು ತಪ್ಪಿತಸ್ಥರನ್ನು ರಕ್ಷಿಸುವ ಯತ್ನ ನಡೆದಿದೆ ಎಂಬ ಸಂಶಯಕ್ಕೆ ಕಾರಣವಾಗಿದೆ.

ಪ್ರಕರಣ ಕುರಿತಂತೆ ಪುನಃ ತನಿಖೆ ನಡೆಸುವಂತೆ ಕೋರಿ ಈಗಿನ ಡಿಡಿಪಿಐ ಮಂಟೇಲಿಂಗಾಚಾರ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಪತ್ರ ಬರೆದಿರುವುದನ್ನು `ಪ್ರಜಾವಾಣಿ~ ಬಹಿರಂಗಪಡಿಸಿದ ನಂತರ ಎಚ್ಚೆತ್ತುಕೊಂಡಿರುವ ಇಲಾಖೆಯ ಗುಲ್ಬರ್ಗ ಪ್ರಾದೇಶಿಕ ಆಯುಕ್ತರ ಕಚೇರಿಯ ಅಧಿಕಾರಿಗಳು, ಸಂಬಂಧಿಸಿದ ದಾಖಲೆಗಳನ್ನು ಕೂಡಲೇ ಕಳುಹಿಸುವಂತೆ ಬುಧವಾರ ನಿರ್ದೇಶನ ನೀಡಿದ್ದಾರೆ.
 
ಅದರನ್ವಯ ಡಿಡಿಪಿಐ ಮಂಟೇಲಿಂಗಾಚಾರ್ ಬುಧವಾರ ಪ್ರಾದೇಶಿಕ ಕಚೇರಿಯ ಹೆಚ್ಚುವರಿ ಆಯುಕ್ತ ಎಸ್.ಜಿ.ವಾಲಿ ಅವರಿಗೆ ಫ್ಯಾಕ್ಸ್ ಮೂಲಕ ಪ್ರಕರಣ ಕುರಿತ ಸಮಗ್ರ ಮಾಹಿತಿಯನ್ನು ರವಾನಿಸಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಇಲ್ಲಿನ ಕಚೇರಿ ಮೂಲಗಳು ತಿಳಿಸಿವೆ.

ಇಡೀ ಪ್ರಕರಣ ಕುರಿತಂತೆ ತನಿಖೆ ನಡೆದಿದ್ದು, ಇಲಾಖೆಯ ಕೆಲವು ಅಧಿಕಾರಿಗಳು ತಪ್ಪಿತಸ್ಥರೆಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.