ಬಳ್ಳಾರಿ: ಶಿಕ್ಷಕಿಯೊಬ್ಬರು ಸೋಮವಾರ ಕೋಲಿನಿಂದ ಬಲವಾಗಿ ಹೊಡೆದ ಪರಿಣಾಮ ನಗರದ ಶಾಲೆಯೊಂದರ ಎಲ್ಕೆಜಿ ವಿದ್ಯಾರ್ಥಿ ಮಹಮ್ಮದ್ ಖಾದರ್ ಕಣ್ಣಿಗೆ ತೀವ್ರ ಗಾಯವಾಗಿದೆ ಎಂದು ಆರೋಪಿಸಲಾಗಿದೆ. ಗಾಯಗೊಂಡಿರುವ ಮಗು ದೃಷ್ಟಿ ಕಳೆದುಕೊಳ್ಳುವ ಅಪಾಯವಿದೆ ಎನ್ನಲಾಗಿದೆ.
ನಗರದ ಕಮ್ಮಿಂಗ್ ರಸ್ತೆಯಲ್ಲಿರುವ ಮಕ್ಕಳ ಮಂಟಪ ಶಾಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಸೋಮವಾರ ಶಾಲೆಯಲ್ಲಿ ಇತರೆ ಮಕ್ಕಳೊಂದಿಗೆ ಸೇರಿ ಗಲಾಟೆ ಮಾಡುತ್ತಿದ್ದುದರಿಂದ ಆಕ್ರೋಶಗೊಂಡ ಶಿಕ್ಷಕಿ ಕೈಯಲ್ಲಿದ್ದ ಕೋಲಿನಿಂದ ಮಹಮ್ಮದ್ ಖಾದರ್ಗೆ ಹೊಡೆದರು. ಏಟಿನಿಂದ ಮಗುವಿನ ಎಡಗಣ್ಣಿನ ಒಳಪದರಕ್ಕೆ ತೀವ್ರ ಪೆಟ್ಟಾಗಿ ರಕ್ತ ಸುರಿದಿದೆ ಎಂದು ಪೋಷಕರು ಆರೋಪಿಸಿದ್ದಾರೆ.
`ವಿದ್ಯಾರ್ಥಿಗೆ ನಾನು ಹೊಡೆದಿಲ್ಲ. ಕೋಲು ಹಿಡಿದುಕೊಂಡು ನಿಂತಿದ್ದಾಗ ಆತನೇ ಹಿಂದಿನಿಂದ ಓಡಿ ಬಂದು ಡಿಕ್ಕಿ ಹೊಡೆದ. ಆಗ ಕೋಲು ತಾಗಿ ಗಾಯವಾಗಿದೆ~ ಎಂದು ಶಿಕ್ಷಕಿ ಜ್ಯೋಯಿಸಾ ತಿಳಿಸಿದ್ದಾರೆ.
ಸೋಮವಾರ ರಾತ್ರಿ ಮಗುವಿನ ಕಣ್ಣಿಗೆ ಗಾಯವಾಗಿರುವುದನ್ನು ಕಂಡ ಪಾಲಕರು ಚಿಕಿತ್ಸೆಗೆ ನೇತ್ರ ಚಿಕಿತ್ಸಾಲಯಕ್ಕೆ ಕರೆದೊಯ್ದಾಗ ಪರೀಕ್ಷಿಸಿದ ವೈದ್ಯರು, `ಮಗುವಿನ ಕಣ್ಣಿನ ಒಳಪದರದಲ್ಲಿ ಗಾಯವಾಗಿದೆ. ದೃಷ್ಟಿಹೀನತೆಗೆ ಒಳಗಾಗುವ ಸಾಧ್ಯತೆ ಇದೆ~ ಎಂದು ತಿಳಿಸಿರುವುದಾಗಿ ಮಗುವಿನ ತಂದೆ ಬಾಬು ಫಕ್ರುದ್ದೀನ್ ಮತ್ತು ತಾಯಿ ಜೈನಬ್ಬೀ ತಿಳಿಸಿದ್ದಾರೆ.
ಬಡತನದ ಹಿನ್ನೆಲೆಯ ಈ ಕುಟುಂಬಕ್ಕೆ ಖರ್ಚು ಭರಿಸಲು ಶಕ್ತಿ ಇಲ್ಲದಿರುವುದರಿಂದ ಮಗುವಿಗೆ ದೃಷ್ಟಿ ಹೋಗದಂತೆ ಅಗತ್ಯ ಚಿಕಿತ್ಸೆ ಕೊಡಿಸಬೇಕು ಎಂದೂ ಕೋರಿದ್ದಾರೆ.
ಶಿಕ್ಷಕಿಯ ತಪ್ಪಿಲ್ಲ
ಶಿಕ್ಷಕರಿಗೆ ಮಕ್ಕಳ ಮೇಲೆ ಪ್ರೀತಿ, ಕಾಳಜಿ ಇರುತ್ತದೆ. ಮಗು ತಾನೇ ಬಂದು ಕೋಲಿಗೆ ಡಿಕ್ಕಿ ಹೊಡೆದು ಗಾಯಗೊಂಡಿದೆ. ಸೋಮವಾರ ಗಾಯ ಅಷ್ಟಾಗಿ ಕಾಣಲಿಲ್ಲ. ಪರಿಸ್ಥಿತಿಯ ಗಂಭೀರತೆ ಅರ್ಥವಾಗಿರಲಿಲ್ಲ. ಅಲ್ಪಸ್ವಲ್ಪ ಪೆಟ್ಟು ಬಿದ್ದಿದೆ ಎಂದೇ ಭಾವಿಸಲಾಗಿತ್ತು. ಮಕ್ಕಳ ಮೇಲೆ ಹಲ್ಲೆ ನಡೆಸುವಂತಹ ಕುಕೃತ್ಯ ಮಾಡುವುದಿಲ್ಲ
- ಲತಾ ಪ್ರಸಾದ್, ಮುಖ್ಯ ಶಿಕ್ಷಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.