ಉಡುಪಿ: ಶಿರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿ ಅವರ ನಡೆಯ ವಿರುದ್ಧ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಮಠಾಧೀಶರು ಗುರುವಾರ ಸಭೆ ನಡೆಸಿದರು.
ಕೃಷ್ಣಾಪುರ ಮಠದ ವಿದ್ಯಾಸಾಗರ, ಅದಮಾರು ಮಠದ ವಿಶ್ವಪ್ರಿಯ, ಕಿರಿಯ ಈಶಪ್ರಿಯ, ಕಾಣಿಯೂರು ಮಠದ ವಿದ್ಯಾವಲ್ಲಭ, ಸೋದೆ ಮಠದ ವಿಶ್ವವಲ್ಲಭ ಹಾಗೂ ಪೇಜಾವರ ಕಿರಿಯ ವಿಶ್ವಪ್ರಸನ್ನ ಸ್ವಾಮೀಜಿ ಸಭೆಯಲ್ಲಿ ಭಾಗವಹಿಸಿದ್ದರು. ಅಷ್ಟ ಮಠಗಳ ಘನತೆಗೆ ಧಕ್ಕೆಯಾಗುವಂತೆ ನಡೆದುಕೊಳ್ಳುತ್ತಿರುವ ಲಕ್ಷ್ಮೀವರತೀರ್ಥ ಸ್ವಾಮೀಜಿ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಎಲ್ಲರೂ ಒಕ್ಕೊರಲಿನಿಂದ ಒತ್ತಾಯಿಸಿದರು ಎಂದು ತಿಳಿದು ಬಂದಿದೆ.
ಅಷ್ಟ ಮಠಾಧೀಶರೆಲ್ಲರಿಗೂ ಮಕ್ಕಳಿದ್ದಾರೆ ಎಂದು ಶಿರೂರು ಶ್ರೀಗಳು ಆರೋಪ ಮಾಡಿದ್ದಾರೆ ಎನ್ನಲಾದ ವಿಡಿಯೊ ತುಣುಕಗಳನ್ನುಈಚೆಗೆ ಬಿ.ಟಿವಿ ಪ್ರಸಾರ ಮಾಡಿತ್ತು. ಆದರೆ, ಅದು ತಿರುಚಿದ ವಿಡಿಯೊ ಎಂದು ಶಿರೂರು ಸ್ವಾಮೀಜಿ ಸ್ಪಷ್ಟಪಡಿಸಿದ್ದರು.
ಒತ್ತಡ ತಂತ್ರ: ಉಡುಪಿಯಲ್ಲಿ ಇರುವುದು ಕೃಷ್ಣ ಪೊಜೆಗೆ ಮಾಡಿಕೊಂಡ ಅಲಿಖಿತ ಸಂವಿಧಾನ. ಇಲ್ಲಿ ಏನೇ ಬೆಳವಣಿಗೆ ಆಗುವುದಿದ್ದರೂ ಅದು ಒತ್ತಡ ತಂತ್ರವೇ ಹೊರತು ಬೇರೇನಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಸದ್ಯಕ್ಕೆ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಅಷ್ಟಮಠಾಧೀಶರ ಪೈಕಿ ಹಿರಿಯರು. ಹೀಗಾಗಿ ಉಳಿದ ಮಠಾಧೀಶರು ಅವರ ನೇತೃತ್ವದಲ್ಲೇ ಸಭೆ ನಡೆಸಿದ್ದಾರೆ.
ಶೀರೂರು ಶ್ರೀಗಳು ಪೀಠತ್ಯಾಗಮಾಡಬೇಕು, ತಕ್ಷಣ ಉತ್ತರಾಧಿಕಾರಿಯನ್ನು ನೇಮಿಸಬೇಕು ಎಂಬ ವಿಚಾರದಲ್ಲಿ ಒತ್ತಡ ತಂತ್ರ ಹೇರುವುದರ ಜತೆಗೆ, ಮಠಕ್ಕೆ ಸಂಬಂಧಪಟ್ಟ ಹಲವಾರು ಪೂಜಾ ಕ್ರಮಗಳು, ವಿಧಿ ವಿಧಾನಗಳಿಂದ ಶ್ರೀಗಳನ್ನು ದೂರ ಇಡುವ ಪ್ರಯತ್ನ ನಡೆಸಬಹುದು ಎಂದು ಮಠದ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.