ಬೆಂಗಳೂರು: ಬಿಜೆಪಿ ಸರ್ಕಾರ ಅಂತಿಮ ದಿನಗಳಲ್ಲಿ ಕೈಗೊಂಡಿದ್ದ ಎಲ್ಲ ನಿರ್ಧಾರಗಳನ್ನು ಪುನರ್ ಪರಿಶೀಲನೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಇಲಾಖಾ ಸಚಿವರಿಗೆ ಸೂಚನೆ ನೀಡಿದ್ದಾರೆ.
ಹಿಂದಿನ ಸರ್ಕಾರ ಕೊನೆಯ ದಿನಗಳಲ್ಲಿ ಮದ್ಯದ ದರ ಹೆಚ್ಚಳ ಮಾಡಿತ್ತು. ಅದನ್ನೂ ಕೂಡ ಪುನರ್ ಪರಿಶೀಲನೆ ಮಾಡಲಾಗುತ್ತಿದೆ ಎಂದು ಅಬಕಾರಿ ಸಚಿವ ಸತೀಶ ಜಾರಕಿಹೊಳಿ ಶನಿವಾರ ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರಿಗೆ ತಿಳಿಸಿದರು.
ಅಬ್ಕಾರಿ ಇಲಾಖೆಗೆ ಸಂಬಂಧಿಸಿದಂತೆ ಹಿಂದಿನ ಸರ್ಕಾರ ಕೊನೆಯ ಹಂತದಲ್ಲಿ ಕೈಗೊಂಡ ಇತರ ನಿರ್ಧಾರಗಳನ್ನು ಪರಿಶೀಲಿಸುತ್ತಿದೆ ಎಂದರು.
ವಾರ್ಷಿಕ ಸುಮಾರು 12 ಸಾವಿರ ಕೋಟಿ ರೂಪಾಯಿ ಆದಾಯ ತಂದುಕೊಡುತ್ತಿರುವ ಅಬ್ಕಾರಿ ಇಲಾಖೆಗೆ ಸೂಕ್ತ ಪ್ರಮಾಣದ ಅನುದಾನ ಸಿಗುತ್ತಿಲ್ಲ. ಆದಾಯದ ಶೇ 1ರಷ್ಟು ಅನುದಾನವನ್ನು ನೀಡುವಂತೆ ಕೇಳಿಕೊಳ್ಳಲಾಗಿದೆ ಎಂದರು. ಇಲಾಖೆಯಲ್ಲಿ ಸುಮಾರು 2500 ಸಿಬ್ಬಂದಿ ಕೊರತೆ ಇದೆ. ಈಗ 200 ಅಬ್ಕಾರಿ ಇನ್ಸ್ಪೆಕ್ಟರ್ಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದರು.
ಸಾರಾಯಿ ಪುನರಾರಂಭ ಹಾಗೂ ಅಗ್ಗದ ಮದ್ಯ ನೀಡುವ ಪ್ರಸ್ತಾಪ ಇಲ್ಲ. ವಿಜಾಪುರ, ಬಾಗಲಕೋಟೆ, ಗದಗ ಮತ್ತು ಬೆಳಗಾವಿ ಜಿಲ್ಲೆಗಳ 80 ಗ್ರಾಮಗಳಲ್ಲಿ ಕಳ್ಳಬಟ್ಟಿ ತಯಾರಿಕೆ ಇನ್ನೂ ನಡೆಯುತ್ತಿದೆ. ಈ ಉದ್ಯೋಗದಲ್ಲಿ ಇರುವವರಿಗೆ ಪುನರ್ ವಸತಿ ಕಲ್ಪಿಸಿ ಕಳ್ಳಬಟ್ಟಿ ಮುಕ್ತ ರಾಜ್ಯವನ್ನಾಗಿ ಮಾಡಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ತಡೆ ಹಾಗೂ ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡುವ ಕುರಿತಂತೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಎಲ್ಲ ಪಕ್ಷಗಳ ಮುಖಂಡರ ಸಭೆ ಕರೆದು ನಿರ್ಧರಿಸಲಾಗುವುದು ಎಂದು ಹೇಳಿದರು.
ಕೆಲವು ಮದ್ಯದಂಗಡಿಯಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ದೂರುಗಳಿವೆ. ಇದನ್ನು ತಪ್ಪಿಸಲು ಎಲ್ಲ ಅಂಗಡಿಗಳಲ್ಲಿ ದರ ಪಟ್ಟಿಯನ್ನು ಹಾಕುವಂತೆ ಸೂಚಿಸಲಾಗುವುದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.