ಶಿರಸಿ: ಬದುಕಿನ ಅನುಭವದಲ್ಲಿ ಅನೇಕ ಸಂಗತಿಗಳನ್ನು ಹೆಕ್ಕಿ ತೆಗೆದು ಜೋಡಿಸಿ ಅಕ್ಷರ ರೂಪ ನೀಡುವುದೇ ಕಥೆಯಾಗಿದೆ ಎಂದು ಕಥೆಗಾರ ವಿವೇಕ ಶಾನಭಾಗ ಹೇಳಿದರು.ಅವರು ನಗರದ ವಿನಾಯಕ ಸಭಾಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರತಿಷ್ಠಿತ ಬಿ.ಎಚ್.ಶ್ರೀಧರ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
`ಒಬ್ಬ ಲೇಖಕನ ಕಥೆ ಯಾವಾಗಲೂ ಅನುಭವಿಸಿದ್ದು, ಊಹಿಸಿದ್ದು ಅಥವಾ ಕೇಳಿದ್ದು ಆಗಿರಬಹುದು. ಕಥೆಯ ತೀವ್ರತೆ ಇದೆಯಲ್ಲ ಅದು ಜೀವನವನ್ನು ಅರ್ಥೈಸಿಕೊಳ್ಳುವಿಕೆಯೂ ಆಗಿದೆ. ಯಶವಂತ ಚಿತ್ತಾಲರ ಬರಹದಲ್ಲಿ ಕಾಣುವ ಸಣ್ಣ ಪುಟ್ಟ ಸಂಗತಿಗಳು, ಜೀವನದ ವಿವರಗಳು ಮ್ಯಾಜಿಕ್ನಂತೆ ತುಂಬ ಪ್ರಭಾವ ಬೀರಿದವು. ಅದು ಕಥಾಲೋಕಕ್ಕೆ ನನ್ನನ್ನು ಕರೆದೊಯ್ಯುವ ಹುಮ್ಮಸ್ಸು ನೀಡಿತು~ ಎಂದರು.
ಸಾಹಿತಿ ಜಯಂತ ಕಾಯ್ಕಿಣಿ ಮಾತನಾಡಿ, ಇಂದು ವೈಚಾರಿಕತೆ, ಚಿಂತನೆ ಬೇಡವಾಗಿದೆ. ವೈಚಾರಿಕತೆ ಎಂದರೆ ದೊಡ್ಡ ಪುಸ್ತಕ ಓದುವಿಕೆ ಅಂತಲ್ಲ. ವೈಚಾರಿಕತೆ ಮತ್ತು ಭಾವನೆ ಬೇರೆ ಅಲ್ಲ. ಅದೇ ಸಾಹಿತ್ಯದ ಜೀವಾಳವಾಗಿದೆ. ಆದರೆ ಇಂದಿನ ಪೀಳಿಗೆಯಲ್ಲಿ ಚಿಂತನಶೀಲ ತನ್ಮಯತೆ ಕಡಿಮೆಯಾಗಿದೆ ಎಂದು ನುಡಿದರು.
ವಿದ್ಯಾರ್ಥಿನಿ ಶ್ರುತಿ ಭಟ್ಟ ಇವರಿಗೆ ಬಿ.ಎಚ್.ಶ್ರೀಧರ ಶಿಕ್ಷಣ ಪುರಸ್ಕಾರ ನೀಡಲಾಯಿತು. ರೇಖಾ ಹೆಬ್ಬಾರ ಸ್ವಾಗತಿಸಿದರು. ಕಿರಣ ಭಟ್ಟ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.