ಬೆಂಗಳೂರು, (ಪಿಟಿಐ): ಗಣಿಧಣಿಗಳಾದ ಬಳ್ಳಾರಿಯ ರೆಡ್ಡಿ ಸಹೋದರರ ನಿಕಟವರ್ತಿ ಮಾಜಿ ಸಚಿವ ಬಿ.ಶ್ರೀರಾಮುಲು ಭಾನುವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆಯನ್ನು ಘೋಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ತಮ್ಮ ರಾಜೀನಾಮೆ ಪತ್ರವನ್ನು ಇದೇ ದಿನ ಮಡಿಕೇರಿಯಲ್ಲಿರುವ ವಿಧಾಸಭಾಧ್ಯಕ್ಷ ಕೆ.ಜಿ ಬೋಪಯ್ಯ ಅವರಿಗೆ ತಲುಪಿಸುವುದಾಗಿ ತಿಳಿಸಿದ್ದಾರೆ.
ಲೋಕಾಯುಕ್ತರು ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಕುರಿತ ತಮ್ಮ ತನಿಖಾ ವರದಿಯಲ್ಲಿ ರೆಡ್ಡಿ ಸಹೋದರರು ಅಕ್ರಮ ಗಣಿಗಾರಿಕೆಯಲ್ಲಿ ತೊಡಿಗಿರುವ ಆರೋಪ ಹೋರಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸದಾನಂದಗೌಡ ಅವರು, ಶ್ರೀರಾಮುಲು ಅವರನ್ನು ಸಂಪುಟದಿಂದ ದೂರ ಇಟ್ಟಿದ್ದರು. ಇದರಿಂದ ರೆಡ್ಡಿ ಸೋದರರು ಅತೃಪ್ತಿಹೊಂದಿದ್ದು, ಈ ರಾಜೀನಾಮೆಗೆ ಅದುವೇ ಕಾರಣ ಎನ್ನಲಾಗಿದೆ.
ಜನಾರ್ಧನ ರೆಡ್ಡಿ ಮತ್ತು ಕರುಣಾಕರ ರೆಡ್ಡಿ ಅವರು, ಶ್ರೀರಾಮುಲು ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಮುಖ್ಯಮಂತ್ರಿ ಸದಾನಂದಗೌಡ ಅವರನ್ನು ಆಗ್ರಹಿಸಿದ್ದರು.
ಲೋಕಾಯುಕ್ತರು ಗಣಿ ಅಕ್ರಮ ತನಿಖಾ ವರದಿಯಲ್ಲಿ ತಮ್ಮ ಹೆಸರನ್ನೂ ಪ್ರಸ್ತಾಪಿರುವ ಕಾರಣ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟಿದ್ದರು. ಅವರ ಸ್ಥಾನವನ್ನು ತುಂಬಿರುವ ಸದಾನಂದಗೌಡ ಅವರು ಅಧಿಕಾರ ಸ್ವೀಕರಿಸಿ ಒಂದು ತಿಂಗಳು ಕಳೆಯುತ್ತಿದ್ದಂತೆ, ಶ್ರೀರಾಮುಲು ಅವರ ರಾಜೀನಾಮೆಯ ನಿರ್ಧಾರ ಗೌಡರಿಗೆ ಸವಾಲು ಎಸೆದಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.