ಕೃಷ್ಣರಾಜಪೇಟೆ: ಚೆನ್ನೈ ರೈಲ್ವೆ ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಮೃತಪಟ್ಟ ಸಾಫ್ಟ್ವೇರ್ ಎಂಜಿನಿಯರ್ ಸ್ವಾತಿ ಅವರ ಕುಟುಂಬಕ್ಕೆ ಕೇವಲ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿರುವ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ಕ್ರಮವನ್ನು ಖಂಡಿಸಿ, ಅವರಿಗೆ ತಲಾ ಒಂದು ರೂಪಾಯಿ ಮನಿ ಆರ್ಡರ್ ಕಳುಹಿಸುವ ಮೂಲಕ ತಾಲ್ಲೂಕಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶನಿವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರಮುಖ ಅಂಚೆ ಕಚೇರಿಯಲ್ಲಿ ಶನಿವಾರ ಬೆಳಿಗ್ಗೆ ಮನಿಯಾರ್ಡರ್ ಮಾಡಿದ ಡಾ.ಕೃಷ್ಣಮೂರ್ತಿ, ಎಚ್.ಬಿ. ಮಂಜುನಾಥ್, ಗೌಡರಾಜು, ನಟರಾಜು, ನಾಗರಾಜು, ರಾಮೇಗೌಡ, ವಿಕ್ಕಿ ಮತ್ತಿತರರು ರೈಲ್ವೆ ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶೃಂಗೇರಿ ಬಳಿ ಅಕ್ರಮವಾಗಿ ಗೋವುಗಳನ್ನು ಸಾಗಿಸುವ ವೇಳೆ ಪೋಲಿಸರ ಗುಂಡಿಗೆ ಬಲಿಯಾದ ಕಬೀರ್ ಕುಟುಂಬಕ್ಕೆ ₨10 ಲಕ್ಷ ಪರಿಹಾರ ನೀಡಿದೆ. ಬಾಂಬ್ ಸ್ಫೋಟದ ರೂವಾರಿ ಮದನಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಲು ಸರ್ಕಾರ ಮುಂದಾಗಿದೆ. ಧರ್ಮಾಧಾರಿತವಾಗಿ ಪರಿಹಾರ ಒದಗಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕ್ರಮ ಸರಿಯಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಸಾಫ್ಟ್ವೇರ್ ಎಂಜಿನಿಯರ್ ಸ್ವಾತಿ ಅವರ ಕುಟುಂಬಕ್ಕೆ ಇಪ್ಪತ್ತೈದು ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ ತಲಾ ಹತ್ತು ಲಕ್ಷ ರೂಪಾಯಿ ಪರಿಹಾರ ನೀಡಲು ಸರ್ಕಾರ ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.