ADVERTISEMENT

ಸಂಘ ಪರಿವಾರದ ಸಂಬಂಧ ಬಿಡಲ್ಲ: ಬಿಎಸ್‌ವೈ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 19:30 IST
Last Updated 12 ಅಕ್ಟೋಬರ್ 2012, 19:30 IST

ಹುಬ್ಬಳ್ಳಿ: `ಡಿಸೆಂಬರ್‌ನಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿ ಹೊಸ ಪ್ರಾದೇಶಿಕ ಪಕ್ಷ ಕಟ್ಟಿದರೂ ಸಂಘ-ಪರಿವಾರದೊಂದಿಗಿನ ಸಂಬಂಧ ಬಿಡಲ್ಲ~ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಹೊಸ ಪಕ್ಷ ರಚನೆಗೆ ಸಂಬಂಧಪಟ್ಟು ಹುಬ್ಬಳ್ಳಿಯಲ್ಲಿ ಆಪ್ತರೊಂದಿಗೆ ಸಮಾಲೋಚನೆ ನಡೆಸಲು ಬಂದಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

`ಮುಖ್ಯಮಂತ್ರಿಯಾಗಿದ್ದಾಗ ಎಲ್ಲ ಸಮುದಾಯದವರಿಗೆ ನ್ಯಾಯ ಒದಗಿಸಿದ್ದೇನೆ. ಜಾತ್ಯತೀತ ನೀತಿಯನ್ನು ಅನುಸರಿಸಿ ಕೆಲಸ ಮಾಡಿದ್ದೇನೆ. ಇದು ಬಿಜೆಪಿ ನಾಯಕರಿಗೆ ಹಿಡಿಸಲಿಲ್ಲ. ಇದರ ಫಲವಾಗಿ ವಿವಿಧ ತೊಂದರೆಗಳನ್ನು ಅನುಭವಿಸಿದೆ. ಹೀಗಾಗಿ ಪಕ್ಷ ಬಿಡುವ ಯೋಚನೆ ಮಾಡಬೇಕಾಗಿ ಬಂತು.

ಹೊಸ ಪಕ್ಷ ರಚನೆಯ ಹಿನ್ನೆಲೆಯಲ್ಲಿ ಎಲ್ಲ ವರ್ಗದ ಮುಖಂಡರೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇನೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಜನಾಂಗದ ಮುಖಂಡರ ಜೊತೆಗೂ ಮಾತುಕತೆ ನಡೆದಿದೆ. ಹೊಸ ಪಕ್ಷಕ್ಕೆ ಯಾವ್ಯಾವ ಮುಖಂಡರನ್ನು ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ಗಂಭೀರ ಚಿಂತನೆ ನಡೆದಿದೆ~ ಎಂದು ಅವರು ಹೇಳಿದರು.

`ಹೊಸ ಪಕ್ಷದಿಂದ ಈಗಿನ ಸರ್ಕಾರಕ್ಕೆ ಯಾವುದೇ ತೊಂದರೆಯಾಗಬಾರದು. ಹೀಗಾಗಿ ಸಚಿವರು ಹಾಗೂ ಶಾಸಕರಿಗೆ ಸದ್ಯಕ್ಕೆ ನನ್ನ ಜೊತೆ ಬರಬಾರದೆಂದು ಹೇಳಿದ್ದೇನೆ. ಸರ್ಕಾರದ ಅವಧಿ ಮುಗಿದ ನಂತರವಷ್ಟೇ ಅವರು ಬರುತ್ತಾರೆ~ ಎಂದರು.

ಯಡಿಯೂರಪ್ಪ ಅವರೊಂದಿಗಿದ್ದ ಕರ್ನಾಟಕ ಕೈಮಗ್ಗ ನಿಗಮದ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ, ` ಯಡಿಯೂರಪ್ಪ ಸ್ಥಾಪಿಸುವ ಪಕ್ಷ ಸೇರಲು ವಿಧಾನಸಭೆಯ 70 ಸದಸ್ಯರು, ವಿಧಾನಪರಿಷತ್‌ನ 20 ಸದಸ್ಯರು ಹಾಗೂ 12 ಸಂಸದರು ಸಿದ್ಧರಿದ್ದಾರೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.