ADVERTISEMENT

ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2013, 20:07 IST
Last Updated 4 ಜುಲೈ 2013, 20:07 IST

ಹುಬ್ಬಳ್ಳಿ: ಉತ್ತರಾಖಂಡದಲ್ಲಿ ಭಾರಿ ಪ್ರವಾಹದಿಂದ ಸಂತ್ರಸ್ತರಾದವರಿಗಾಗಿ ನೈರುತ್ಯ ರೈಲ್ವೆ ಸಂಗ್ರಹಿಸಿದ ಪರಿಹಾರ ಸಾಮಗ್ರಿಗಳನ್ನು ಗುರುವಾರ ಹುಬ್ಬಳ್ಳಿಯಿಂದ ರೈಲಿನಲ್ಲಿ ರವಾನಿಸಲಾಯಿತು.

ಇಲ್ಲಿಯ ರೈಲು ನಿಲ್ದಾಣದಲ್ಲಿ ಸಂಜೆ ನಡೆದ ಕಾರ್ಯಕ್ರಮದಲ್ಲಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಶೋಕ ಕುಮಾರ್ ಮಿತ್ತಲ್ ಅವರು ರೈಲಿಗೆ ಹಸಿರು ನಿಶಾನೆ ತೋರಿಸಿದರು.

ನೈರುತ್ಯ ರೈಲ್ವೆ ಕಚೇರಿ, ಹುಬ್ಬಳ್ಳಿ, ಬೆಂಗಳೂರು, ಮೈಸೂರು ವಿಭಾಗ ಕಚೇರಿ, ಮೈಸೂರು ಮತ್ತು ಹುಬ್ಬಳ್ಳಿ ಕಾರ್ಯಾಗಾರ ಮುಂತಾದ ಕಡೆಗಳ ಅಧಿಕಾರಿಗಳು, ಸಿಬ್ಬಂದಿ ಮತ್ತು ಅವರ ಕುಟುಂಬದವರಿಂದ ನೈರುತ್ಯ ರೈಲ್ವೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸದಸ್ಯರು ಸಂಗ್ರಹಿಸಿದ ಸುಮಾರು 18ಟನ್ ಸಾಮಗ್ರಿಗಳನ್ನು ಸಾಗಿಸಲಾಯಿತು.

ಅಕ್ಕಿ, ಗೋಧಿಹಿಟ್ಟು, ಬೇಳೆ, ಸಕ್ಕರೆ, ಚಹಾಪುಡಿ, ಬಿಸ್ಕಿಟ್, ಟೂತ್‌ಪೇಸ್ಟ್, ಸೋಪ್, ಟವೆಲ್ ಮುಂತಾದವು ಸೇರಿದಂತೆ ಒಟ್ಟು ರೂ.4 ಲಕ್ಷ ಮೊತ್ತದ ವಸ್ತುಗಳು ಇದರಲ್ಲಿ ಒಳಗೊಂಡಿವೆ.  

`ಇದೇ 6ರಂದು ರೈಲು ಡೆಹ್ರಾಡೂನ್ ತಲುಪಿ, ಸಾಮಗ್ರಿಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಿದೆ' ಎಂದು ಅಶೋಕ ಕುಮಾರ್ ಮಿತ್ತಲ್ ಪತ್ರಕರ್ತರಿಗೆ ತಿಳಿಸಿದರು.

`ಪರಿಹಾರ ಸಾಮಗ್ರಿಗಳನ್ನು ಸಂಗ್ರಹಿಸುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸದಸ್ಯರು ಸಾಕಷ್ಟು ಶ್ರಮಿಸಿದ್ದಾರೆ. ಸಾಮಗ್ರಿಗಳನ್ನು ವಿಶೇಷವಾಗಿ ಪ್ಯಾಕ್ ಮಾಡಲಾಗಿದ್ದು ಎಲ್ಲ ಪೊಟ್ಟಣಗಳ ಮೇಲೆಯೂ ಸಾಮಗ್ರಿಯ ವಿವರ, ತೂಕ ಇತ್ಯಾದಿ ಬರೆಯಲಾಗಿದೆ. ಇದರಿಂದ ವಿತರಿಸುವ ಕಾರ್ಯ ಸುಲಭವಾಗಲಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.