
ಹಳೇಬೀಡು: ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಳೇಬೀಡಿನ ಪುರಾತತ್ವ ಸಂಗ್ರಹಾಲಯವನ್ನು ಮೇಲ್ದರ್ಜೆಗೆ ಏರಿಸಿ ಸಾವಿರಾರು ವಿಗ್ರಹಗಳನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳದಿರುವುದರಿಂದ ಇಲ್ಲಿನ ಹೊಯ್ಸಳೇಶ್ವರ ದೇವಾಲಯದ ಹಿಂಭಾಗದಲ್ಲಿ ಸಂಗ್ರಹಿಸಿರುವ ವಿಗ್ರಹಗಳು ಬಿಸಿಲು, ಮಳೆ, ಗಾಳಿಯ ಹೊಡೆತದಿಂದ ತತ್ತರಿಸುತ್ತಿವೆ.
 
 ನಾಜೂಕು ಹಾಗೂ ಸೂಕ್ಷ್ಮ ಕೆತ್ತನೆ ಕೆಲಸ ಹೊಂದಿರುವ ಪ್ರಾಚೀನ ಕಾಲದ ದೇವಾಲಯಗಳ ಬಿಡಿ ವಿಗ್ರಹಗಳು ಈಗ ಗಿಡಗಂಟಿಗಳಿದ ಮುಚ್ಚಿಹೋಗುತ್ತಿವೆ. ಇಲಾಖೆ ಉತ್ಖನನ ನಡೆಸಿ ನಗರೇಶ್ವರ ದೇವಾಲಯ ಸಂಕೀರ್ಣದಿಂದ ಸಂಗ್ರಹಿಸಿದ ವಿಗ್ರಹಗಳ ರಾಶಿಯ ಸುತ್ತಮುತ್ತ ಇಲಾಖೆಯ ಸ್ಮಾರಕ ವಿಭಾಗ ಆಗಾಗ್ಗೆ ಸ್ವಚ್ಛತಾ ಕಾರ್ಯ ಕೈಗೊಂಡರೂ ವಿಗ್ರಹಗಳನ್ನು ಪೂರ್ಣ ಪ್ರಮಾಣದಲ್ಲಿ ಸಂರಕ್ಷಿಸುವ ಕೆಲಸ ಸಾಧ್ಯವಾಗುತ್ತಿಲ್ಲ.
 
 ಅಮೂಲ್ಯವಾದ ಪ್ರಾಚೀನ ಅವಶೇಷಗಳು ಪ್ರವಾಸಿಗರ ವೀಕ್ಷಣೆಗೂ ಸಿಗದೆ ಮೂಲೆಗುಂಪಾಗುತ್ತಿವೆ.
 
 ಕೇಂದ್ರ ಪುರಾತತ್ವ ಸರ್ವೇಕ್ಷಣಾ ಇಲಾಖೆ ನಾಲ್ಕಾರು ವರ್ಷದಿಂದ ಬೃಹತ್ ವಸ್ತುಸಂಗ್ರಹಾಲಯ ನಿರ್ಮಿಸಲು ಜಮೀನಿಗಾಗಿ ಅನ್ವೇಷಣೆ ನಡೆಸುತ್ತಿದೆ. ಪ್ರವಾಸೋದ್ಯಮ ಇಲಾಖೆಯೂ ್ಙ 30 ಲಕ್ಷ ಅನುದಾನ ನೀಡಿದೆ. ಆಗಾಗ್ಗೆ ಅಧಿಕಾರಿಗಳ ದಂಡು ಸ್ಥಳ ಪರಿಶೀಲನೆ ನಡೆಸುವುದರಲ್ಲಿಯೇ ವರ್ಷಗಳು ಉರುಳುತ್ತಿವೆ. ಹೀಗಾಗಿ, ದೊಡ್ಡ ಮ್ಯೂಸಿಯಂ ನಿರ್ಮಿಸುವ ಕನಸು ನನಸಾಗದೆ ಕಡತದಲ್ಲಿಯೇ ಉಳಿದಿದೆ.
ಇಲಾಖೆಗೆ ಜವಾಬ್ದಾರಿ ಇದೆ
 ಹೊಯ್ಸಳರ ಕಾಲದ ಸ್ಮಾರಕಗಳು ಮೃದು ಕಲ್ಲಿನಿಂದ ರಚನೆಯಾಗಿವೆ. ಅಲ್ಲದೆ, ಅಂದಿನ ಕಾಲದ ಶಿಲ್ಪಿಗಳು ಸೊಗಸಾದ ಕೆತ್ತನೆ ಕೆಲಸ ನಿರ್ವಹಿಸಿ ವಿಗ್ರಹದ ಸೌಂದರ್ಯ ಹೆಚ್ಚಿಸಿದ್ದಾರೆ. ಅವುಗಳನ್ನು ಸಂರಕ್ಷಿಸಲು ಇಲಾಖೆ ಬದ್ಧವಾಗಿದ್ದು, ಉನ್ನತ ಅಧಿಕಾರಿಗಳು ಆಸಕ್ತಿ ವಹಿಸಿದ್ದಾರೆ
 ಸಂಗ್ರಹಾಲಯದ ಪುರಾತತ್ವಶಾಸ್ತ್ರಜ್ಞ
 ಪಿ. ಅರವಜ್ಹಿ.
 
  
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.