ಬೆಂಗಳೂರು: ಸಕಾಲ ವೆಬ್ಸೈಟ್ ಮೂಲಕ ಅರ್ಜಿ ಹಾಗೂ ದೂರುಗಳ ವಿಲೇವಾರಿಗೆ ಜಿಲ್ಲಾಧಿಕಾರಿಗಳಿಗೂ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದೆ. ಮುಖ್ಯಮಂತ್ರಿಯವರ ಸಚಿವಾಲಯದ ನೇರ ಉಸ್ತುವಾರಿಯಲ್ಲಿ ಈ ವೆಬ್ಸೈಟ್ ಮೂಲಕ ಅರ್ಜಿ, ದೂರುಗಳ ವಿಲೇವಾರಿ ನಡೆಯಲಿದೆ.
ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಉಮೇಶ್ ನೇತೃತ್ವದಲ್ಲಿ ಸೋಮವಾರ ವಿಧಾನಸೌಧದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಈ ವಿಷಯ ತಿಳಿಸಿದರು.
ಸಕಾಲಕ್ಕೆ ಸಂಬಂಧಿಸಿದ ದೂರುಗಳ ವಿಲೇವಾರಿಗಾಗಿ www.sakala.kar.nic.in ಎಂಬ ವೆಬ್ಸೈಟ್ ರೂಪಿಸಲಾಗಿದೆ. ಮುಖ್ಯಮಂತ್ರಿಯವರ ಜನತಾದರ್ಶನದಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ವಿಲೇವಾರಿಗೂ ವೆಬ್ಸೈಟ್ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಮುಖ್ಯಮಂತ್ರಿ ಅವರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯನ್ನು ನಿಗದಿ ಮಾಡಿದ್ದರು.
ಆದರೆ, ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಅವರ ನಿಧನದ ಕಾರಣದಿಂದ ಅವರು ಸಭೆಯಲ್ಲಿ ಭಾಗಿಯಾಗಲಿಲ್ಲ. ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಕೂಡ ಸಭೆಯಲ್ಲಿ ಹಾಜರಿರಲಿಲ್ಲ. ಮುಖ್ಯಮಂತ್ರಿಯವರ ಸೂಚನೆಯಂತೆ ಉಮೇಶ್ ಅವರೇ ಸಭೆ ನಡೆಸಿದರು.
ಶ್ರದ್ಧಾಂಜಲಿ ಮರೆತಿದ್ದರು: ಸಭೆ ಆರಂಭಕ್ಕೆ ಕೆಲ ಗಂಟೆಗಳ ಮೊದಲೇ ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ ಇಹಲೋಕ ತ್ಯಜಿಸಿದ್ದರು. ಈ ವಿಷಯ ಸಭೆಯಲ್ಲಿದ್ದ ಎಲ್ಲರಿಗೂ ಗೊತ್ತಿತ್ತು. ಆದರೂ, ಆರಂಭದಲ್ಲಿ ಶ್ರದ್ಧಾಂಜಲಿ ಸಲ್ಲಿಸುವುದನ್ನು ಮರೆತೇಬಿಟ್ಟರು.
ಸ್ವಲ್ಪ ಸಮಯದ ಬಳಿಕ ಉಮೇಶ್ ಅವರ ಬಳಿ ತೆರಳಿದ ಕಿರಿಯ ಅಧಿಕಾರಿಯೊಬ್ಬರು ಪಿಸುದನಿಯಲ್ಲಿ ಏನನ್ನೋ ಹೇಳಿದರು. ನಂತರ ಜಿ.ಎಸ್.ಎಸ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಒಂದು ನಿಮಿಷ ಮೌನ ಆಚರಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.