ಬೆಂಗಳೂರು: ವಿಧಾನಸಭೆ ಸಚಿವಾಲಯದ ಕೆಳಹಂತದ ವಿವಿಧ ಹುದ್ದೆಗಳಿಗೆ ತರಾತುರಿಯಲ್ಲಿ ನೇರವಾಗಿ ನೇಮಕಾತಿ ನಡೆಯುತ್ತಿರುವ ಬಗ್ಗೆ ಅಪಸ್ವರ ಕೇಳಿಬಂದಿದೆ.
ದಲಾಯತ್, ಸ್ವಾಗತಕಾರ, ಚಾಲಕ, ಕಂಪ್ಯೂಟರ್ ಆಪರೇಟರ್ ಮತ್ತು ಕಿರಿಯ ಸಹಾಯಕರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಸುಮಾರು 85 ಹುದ್ದೆಗಳಿಗೆ 10 ಸಾವಿರ ಅರ್ಜಿಗಳು ಬಂದಿದ್ದು, ಶಾಸಕರ ಭವನದಲ್ಲಿ ಕಳೆದ ಕೆಲವು ದಿನಗಳಿಂದ ನೇಮಕಾತಿ ಪ್ರಕ್ರಿಯೆ ನಡೆದಿದೆ. ಭಾನುವಾರವೂ ಸಂದರ್ಶನ ನಡೆಸಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
‘ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯುತ್ತಿಲ್ಲ. ಮೆರಿಟ್ಗೆ ಮಾನ್ಯತೆ ನೀಡುತ್ತಿಲ್ಲ’ ಎಂದು ಕೆಲವು ಅಭ್ಯರ್ಥಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಚುನಾವಣೆ ಸಮೀಪಿಸುತ್ತಿರುವಾಗ ತರಾತುರಿಯಲ್ಲಿ ನೇಮಕ ಮಾಡಲಾಗುತ್ತಿದ್ದು, ಇದು ಅನುಮಾನಗಳಿಗೆ ಎಡೆಮಾಡಿದೆ. ಇನ್ನು ಮೂರ್ನಾಲ್ಕು ತಿಂಗಳಲ್ಲಿ ಕೆಲವರು ನಿವೃತ್ತಿ ಆಗಲಿದ್ದಾರೆ. ಆ ಹುದ್ದೆಗಳಿಗೂ ಈಗಲೇ ಆಯ್ಕೆ ಮಾಡುವ ಪ್ರಯತ್ನವೂ ನಡೆದಿದೆ ಎಂದು ಮೂಲಗಳು ಹೇಳಿವೆ.
ಪಾರದರ್ಶಕವಾಗಿದೆ:
‘ಎಲ್ಲ ಹುದ್ದೆಗಳಿಗೂ ಕಾನೂನು ಪ್ರಕಾರವೇ ನೇಮಕಾತಿ ನಡೆಯುತ್ತಿದೆ. ತರಾತುರಿಯಲ್ಲಿ ನಡೆಯುತ್ತಿಲ್ಲ, ಯಾವುದೇ ನೇಮಕವನ್ನು ಕಾನೂನು ಬಿಟ್ಟು ಮಾಡಲು ಸಾಧ್ಯವೇ ಇಲ್ಲ’ ಎಂದು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಸ್.ಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.