ADVERTISEMENT

ಸರ್ಕಾರಿ ಕಚೇರಿಗಳಲ್ಲೂ ಕಸ ವಿಂಗಡಣೆ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2012, 19:30 IST
Last Updated 18 ಅಕ್ಟೋಬರ್ 2012, 19:30 IST

ಬೆಂಗಳೂರು: ಸರ್ಕಾರಿ ಕಚೇರಿಗಳಲ್ಲೂ ಕಸ ವಿಂಗಡಣೆಯನ್ನು ಕಡ್ಡಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಗುರುವಾರ ಹೇಳಿದರು.

 ಕಸ ವಿಂಗಡಣೆ ಹಾಗೂ ಅದರ ವಿಲೇವಾರಿ ಕುರಿತಂತೆ ಸಚಿವಾಲಯ ಸಿಬ್ಬಂದಿ ಮತ್ತು ಕಾಯದರ್ಶಿಗಳಿಗೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಉತ್ಪಾದನೆಯಾಗುವ ಕಸವನ್ನು ಹಸಿ ಮತ್ತು ಒಣ ಕಸವೆಂದು ಬೇರ್ಪಡಿಸಬೇಕು. ಹಸಿ ಕಸದಿಂದ ಸಾವಯವ ಗೊಬ್ಬರ ತಯಾರಿಸಲು ಪ್ರತ್ಯೇಕವಾದ ಒಂದು ಘಟಕ ಸ್ಥಾಪಿಸಲಾಗುವುದು ಎಂದರು.

ರಾಜ್ಯದಲ್ಲಿ ಆರು ಲಕ್ಷ ಸರ್ಕಾರಿ ನೌಕರರಿದ್ದು, ಪ್ರತಿಯೊಬ್ಬರೂ ಕಸ ವಿಂಗಡಣೆಯ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸಬೇಕು. ಇದು ಅವರ ಜವಾಬ್ದಾರಿಯೂ ಹೌದು. ತಮ್ಮ ನಿವಾಸ, ನೆರೆಹೊರೆ ಹಾಗೂ ಕಚೇರಿಗಳನ್ನು ಸ್ವಚ್ಛವಾಗಿಟ್ಟುಕೊಂಡು ಬೆಂಗಳೂರು ನಗರವನ್ನು ಕಸಮುಕ್ತ ನಗರ ಮಾಡಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಸಲಹೆ ಮಾಡಿದರು.

ಮಾದರಿ: ವೈದ್ಯ ವೃತ್ತಿಯನ್ನು ತ್ಯಜಿಸಿ, ಘನ ತ್ಯಾಜ್ಯ ವಿಂಗಡಣೆ ಹಾಗೂ ಗೊಬ್ಬರ ತಯಾರಿಕೆಯಲ್ಲಿ ತೊಡಗಿಸಿಕೊಂಡಿರುವ ಡಾ.ಮೀನಾಕ್ಷಿ ಅವರು ಮಲ್ಲೆೀಶ್ವರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಕೈಗೊಂಡಿರುವ ಕಸ ವಿಂಗಡಣೆ ಹಾಗೂ ಗೊಬ್ಬರ ತಯಾರಿಕಾ ಘಟಕ ಕುರಿತು ವಿವರಣೆ ನೀಡಿದರು.

ಹಸಿ ಮತ್ತು ಒಣ ತ್ಯಾಜ್ಯಕ್ಕೆ ಮನೆ ಹಾಗೂ ಕಚೇರಿಗಳಲ್ಲಿ ಪ್ರತ್ಯೇಕ ಕಸದ ಡಬ್ಬಿಗಳನ್ನು ಇಡಬೇಕು. ಮನೆ ಹಾಗೂ ಕಚೇರಿಗಳಲ್ಲಿ ಉತ್ಪಾದನೆಯಾಗುವ ಕಸಕ್ಕೆ ಹಣವೂ ಸಿಗುತ್ತದೆ. ಪ್ರತಿಯೊಬ್ಬರೂ ಕಸವನ್ನು ಬೇರ್ಪಡಿಸಿಯೇ ಪೌರ ಕಾರ್ಮಿಕರಿಗೆ ನೀಡಬೇಕು ಎಂದರು.

ಹಸಿ ಕಸವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕದೆ, ಪ್ರತ್ಯೇಕವಾದ ಕಸದ ಬುಟ್ಟಿಗೆ ಹಾಕಬೇಕು. ಇದನ್ನು ಕಡ್ಡಾಯವಾಗಿ ಮಾಡಬೇಕು. ಆಗಮಾತ್ರ ಕಸಮುಕ್ತ ನಗರ ನೋಡಲು ಸಾಧ್ಯ ಎಂದು ಮೀನಾಕ್ಷಿ ಹೇಳಿದರು.      
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.