ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರು ಸವಾಲಿನ ಲೋಕಸಭಾ ಕ್ಷೇತ್ರವಾಗಿದ್ದು, ಈ ರಾಜಕೀಯ ಸವಾಲನ್ನು ಸಮರ್ಥವಾಗಿ ಎದುರಿಸುತ್ತೇನೆ ಎಂದು ಮೈಸೂರು–ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.
ಅಭ್ಯರ್ಥಿಯಾಗಿ ಘೋಷಣೆಯಾದ ನಂತರ ಮೈಸೂರಿಗೆ ಭೇಟಿ ನೀಡಿ ಶುಕ್ರವಾರ ಸಂಜೆ ಚಾಮುಂಡಿಬೆಟ್ಟದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾ ರರೊಂದಿಗೆ ಮಾತನಾಡಿದರು.
ಪತ್ರಿಕೋದ್ಯಮದಲ್ಲಿ ಸವಾಲುಗಳನ್ನು ಎದುರಿಸಿದ ಅನುಭವ ಇದೆ. ಆ ಕ್ಷೇತ್ರದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲು ಸಾಧ್ಯವಾಯಿತು. ವಾಸ್ತವದಲ್ಲಿ ಬದಲಾವಣೆ ತರಲು ಈಗ ರಾಜಕೀಯ ಪ್ರವೇಶಿಸಿದ್ದೇನೆ. ಇಂಥದ್ದೇ ಕ್ಷೇತ್ರದಲ್ಲಿ ಕಣಕ್ಕೆ ಇಳಿಯಬೇಕು ಎಂದು ಬಯಸಿರಲಿಲ್ಲ. ಸವಾಲಿನ ಕ್ಷೇತ್ರದಲ್ಲಿ ಸ್ಪರ್ಧಿಸಬೇಕೆಂಬ ಇಚ್ಛೆ ಇತ್ತು. ಯಾರನ್ನೂ ವೈರಿ ಅಥವಾ ಎದುರಾಳಿ ಎಂದು ಎಣಿಸುವುದಿಲ್ಲ. ಬರಹದ ಮೂಲಕ ಎಲ್ಲರಿಗೂ ಪರಿಚಿತನಾಗಿದ್ದೇನೆ ಅದೇ ಶ್ರೀರಕ್ಷೆ ಎಂದರು.
ಬರಹಗಾರನಾಗಿದ್ದಾಗ ಹಿನ್ನೆಲೆಯನ್ನೂ ಯಾರೂ ಕೇಳಲಿಲ್ಲ. ಅಭ್ಯರ್ಥಿಯಾದ ತಕ್ಷಣ ಜಾತಿ, ಊರು, ಹಿನ್ನೆಲೆಯ ಹುಡುಕಾಟ ಆರಂಭವಾಗಿದೆ. ರಾಜ್ಯದ 28 ಕ್ಷೇತ್ರಗಳಲ್ಲಿನ ಪಕ್ಷದ ಹುರಿಯಾಳುಗಳಲ್ಲಿ ಅತ್ಯಂತ ಕಿರಿಯ ಅಭ್ಯರ್ಥಿಯಾಗಿದ್ದೇನೆ. ಪಕ್ಷದ ಮುಖಂಡರಾದ ಸಿ.ಎಚ್. ವಿಜಯಶಂಕರ್, ಅಪ್ಪಚ್ಚು ರಂಜನ್ ಇತರರನ್ನು ಭೇಟಿ ಮಾಡಿ ಅಪ್ಪಣೆ ಪಡೆದಿದ್ದೇನೆ ಎಂದು ತಿಳಿಸಿದರು
ಬಿಜೆಪಿ–ಜೆಡಿಎಸ್ ಒಳಒಪ್ಪಂದ ಮಾಡಿಕೊಂಡಿವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷಗಳು ರಾಜಿ ಮಾಡಿಕೊಂಡಿರುವ ಬಗ್ಗೆ ಏನೂ ಗೊತ್ತಿಲ್ಲ. ಬಿಜೆಪಿ ಗುರಿ–ಸಿದ್ಧಾಂತ ತಳಹದಿಯ ಪಕ್ಷವಾಗಿದೆ. ಇಲ್ಲಿ ವೈಯಕ್ತಿಕ ಹಿತಾಸಕ್ತಿಗಳು ಗೌಣ. ಅಸಮಾಧಾನಗಳು ಶಮನವಾಗಲಿವೆ. ಮೋದಿ ಅವರನ್ನು ಪ್ರಧಾನಿ ಮಾಡುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದರು.
ಮೈಸೂರು –ಕೊಡಗು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ.ಎಚ್. ವಿಜಯಶಂಕರ್ ಅವರ ಗೈರು ಎದ್ದು ಕಾಣುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.