ADVERTISEMENT

ಸಾಂಸ್ಕೃತಿಕ ದಸರಾ ಉದ್ಘಾಟನೆಗೆ ಏಣಗಿ ಬಾಳಪ್ಪ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 19:59 IST
Last Updated 18 ಸೆಪ್ಟೆಂಬರ್ 2013, 19:59 IST

ಮೈಸೂರು: ಈ ಬಾರಿಯ ದಸರಾ ಮಹೋತ್ಸ­ವದ ಸಾಂಸ್ಕೃತಿಕ ಕಾರ್ಯ­ಕ್ರಮ­ಗಳನ್ನು ಹಿರಿಯ ರಂಗಕರ್ಮಿ, ಶತಾಯುಷಿ ಏಣಗಿ ಬಾಳಪ್ಪ ಉದ್ಘಾಟಿಸುವರು. ಉದ್ಘಾಟನಾ ಸಮಾರಂಭವು ನಗರದ ಅಂಬಾ ವಿಲಾಸ ಅರಮನೆಯಲ್ಲಿ  ಅ. 5ರಂದು ಸಂಜೆ 5.30ಕ್ಕೆ ನಡೆಯಲಿದೆ.

ಅಕ್ಟೋಬರ್‌ 13ರವರೆಗೆ ನಗರದ ಅಂಬಾ ವಿಲಾಸ ಅರಮನೆ, ಜಗನ್ಮೋಹನ ಅರಮನೆ, ಪುರಭವನ, ಗಾನಭಾರತೀ ಭವನ, ಕುಪ್ಪಣ್ಣ ಉದ್ಯಾನ ಹಾಗೂ ಚಿಕ್ಕ ಗಡಿಯಾರ ಆವರಣದಲ್ಲಿ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ರಷ್ಯಾದ ಕಲಾವಿದರ ನೃತ್ಯ, ಪುರಭವನದಲ್ಲಿ ನಾಟಕಗಳ ಪ್ರದರ್ಶನ, ಕೇಂದ್ರ ಸಂಸ್ಕೃತಿ ಸಚಿವಾಲಯದ ಸಾಂಸ್ಕೃತಿಕ ವಲಯದ ಕಾರ್ಯಕ್ರಮ­ಗಳು ಕಳೆಗಟ್ಟಲಿವೆ. ಇವುಗಳಲ್ಲಿ ಬಿಹು ನೃತ್ಯ, ಕಲರಿ ಪಯಟ್‌, ಅರ್ಜುನ ನೃತ್ಯ, ಪಟಿಯಾನಿ ನೃತ್ಯ, ಸೋಂಗಿಮುಖವಾಟೆ, ಬೊನಾಲು ನೃತ್ಯ, ಬರೇಡಿ ನೃತ್ಯ, ಸಿದ್ಧಿಧಮಾಲ್‌, ಭಾಂಗ್ರಾ, ಸಂಭಲ್‌­ಪುರಿ, ಮಣಿಪುರಿ ಹಾಗೂ ಕುಸಾನು ನೃತ್ಯಗಳು ಪ್ರೇಕ್ಷಕರನ್ನು ರಂಜಿಸಲಿವೆ.

ಇದರೊಂದಿಗೆ ಅ. 6ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ‘ಸೂರ್ಯನಿಂದ ಚಂದ್ರನೆಡೆಗೆ’ ಎಂಬ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸ್ಥಳೀಯ ಕಲಾವಿದರಿಂದ ಅರಮನೆ ಆವರಣದಲ್ಲಿ ನಡೆಯಲಿವೆ. ಅಲ್ಲದೇ ಅ. 6ರಂದು ಸಂಜೆ 6 ಗಂಟೆಗೆ ‘ಮೈಸೂರು ಮಲ್ಲಿಗೆ’ ಎಂಬ ಕಾವ್ಯ-ಕುಂಚ -ನೃತ್ಯ ಕಾರ್ಯಕ್ರಮವನ್ನು ಅರಮನೆ ಆವರಣದಲ್ಲಿ ಏರ್ಪಡಿಸಲಾಗಿದೆ.

ಕಂಬಾರರಿಗೆ ನಾಳೆ ಆಹ್ವಾನ
ಮೈಸೂರು:
ವಿಶ್ವವಿಖ್ಯಾತ 403ನೇ ದಸರಾ ಮಹೋತ್ಸವದ ಉದ್ಘಾಟನೆಗೆ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ರಾಜ್ಯಪಾಲ ಹಂಸರಾಜ ಭಾರದ್ವಾಜ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಲು ದಸರಾ ಸ್ವಾಗತ ಸಮಿತಿ ಸೆ. 20ರಂದು ಬೆಂಗಳೂರಿಗೆ ತೆರಳಲಿದೆ.

‘ಬಿಐಎಎಲ್‌’ನಲ್ಲಿ ದಸರಾ ಕಾರ್ಯಕ್ರಮ
ಮೈಸೂರು:
ದಸರಾ ಮಹೋತ್ಸವದ ಪ್ರಚಾರ ಸಲುವಾಗಿ ಅಕ್ಟೋಬರ್‌ 4, 5 ಹಾಗೂ 6ರಂದು ಬೆಂಗ­ಳೂರಿನ ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದಸರಾ ಮಹೋತ್ಸವದ ಸಾಂಸ್ಕೃತಿಕ ಉಪ ಸಮಿತಿ ಆಯೋಜಿಸಿದೆ.

‘ಅ. 4ರಿಂದ 3 ದಿನಗಳವರೆಗೆ ನಿತ್ಯ ಸಂಜೆ 6ರಿಂದ ರಾತ್ರಿ 9 ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸ­ಲಾಗುತ್ತದೆ.  ಈ ಮೂಲಕ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಪ್ರವಾಸಿ­ಗರನ್ನು ಸೆಳೆಯಲಾಗುತ್ತದೆ’ ಎಂದು ಸಾಂಸ್ಕೃತಿಕ ಉಪಸಮಿತಿ ಉಪ ವಿಶೇ­ಷಾಧಿ­ಕಾರಿ ಡಾ.ಸಿ.ಜಿ.ಬೆಟಸೂರ­ಮಠ ಬುಧವಾರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.