ಬಸವಕಲ್ಯಾಣ (ಬೀದರ್ ಜಿಲ್ಲೆ): ಈಶಾನ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ₹17.34 ಲಕ್ಷ ದುರ್ಬಳಕೆ ಮಾಡಿಕೊಂಡ ಆರೋಪದ ಮೇರೆಗೆ ಸಂಸ್ಥೆಯ ಕಿರಿಯ ಸಹಾಯಕ ಸಚಿನ್ ಸಿಂಗ್ ಎಂಬಾತನನ್ನು ಪೊಲೀಸರು ಶನಿವಾರ ತಡರಾತ್ರಿ ಬಂಧಿಸಿದ್ದಾರೆ.
ಘಟಕದ ಬಸ್ ನಿರ್ವಾಹಕರು ಪ್ರಯಾಣಿಕರಿಂದ ಸಂಗ್ರಹಿಸಿ ನೀಡುವ ಹಣವನ್ನು ಸಚಿನ್ ಸಿಂಗ್ ಪ್ರತಿದಿನ ಸಂಸ್ಥೆಯ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದ್ದರು. ಆದರೆ ಜನವರಿ 4 ಮತ್ತು 5ರಂದು ಹಣ ಜಮೆ ಮಾಡಿರಲಿಲ್ಲ ಎನ್ನಲಾಗಿದೆ.
ಬೀದರ್ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಲೆಕ್ಕಪತ್ರ ಅಧಿಕಾರಿಗಳು ಬಸವಕಲ್ಯಾಣ ಘಟಕದಿಂದ ಎರಡು ದಿನ ಬ್ಯಾಂಕ್ ಖಾತೆಗೆ ಹಣ ಜಮೆ ಆಗಿಲ್ಲ ಎಂದು ಇಲ್ಲಿನ ಲೆಕ್ಕಪತ್ರ ಅಧಿಕಾರಿ ಶಿವಾನಂದ ಅವರಿಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಶನಿವಾರ ಪರಿಶೀಲನೆ ನಡೆಸಿದರು.
‘ಬ್ಯಾಂಕ್ಗೆ ಹಣ ತುಂಬಿದ್ದೇನೆ ಎಂದು ಬ್ಯಾಂಕ್ ಮೊಹರು ಇರುವ ನಕಲಿ ರಸೀದಿಯನ್ನು ಸಚಿನ್ ಸಿಂಗ್ ತೋರಿಸಿದ್ದಾರೆ’ ಎಂದು ಸಂಸ್ಥೆಯ ಮೂಲಗಳು
ತಿಳಿಸಿವೆ.
ಇಲ್ಲಿನ ಘಟಕ ವ್ಯವಸ್ಥಾಪಕ ರಾಜಶೇಖರ ದೂರು ದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.