ADVERTISEMENT

ಸಾವಿರ ದಿನ ಪೂರೈಸಿದ ಮಹದಾಯಿ ಹೋರಾಟ

ಬಂಡಾಯದ ನೆಲದಲ್ಲಿ ಹೊಸ ಇತಿಹಾಸ ನಿರ್ಮಾಣ; ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 19:30 IST
Last Updated 9 ಏಪ್ರಿಲ್ 2018, 19:30 IST
ಮಹದಾಯಿ ಹೋರಾಟಕ್ಕೆ 999ನೇ ದಿನವಾದ ಸೋಮವಾರ ರೈತ ಮುಖಂಡ ಅರ್ಜುನ ಮಾನೆ ನರಗುಂದದಲ್ಲಿ ಮಾತನಾಡಿದರು
ಮಹದಾಯಿ ಹೋರಾಟಕ್ಕೆ 999ನೇ ದಿನವಾದ ಸೋಮವಾರ ರೈತ ಮುಖಂಡ ಅರ್ಜುನ ಮಾನೆ ನರಗುಂದದಲ್ಲಿ ಮಾತನಾಡಿದರು   

ನರಗುಂದ (ಗದಗ ಜಿಲ್ಲೆ): ಬಂಡಾಯದ ನಗರಿ ಎಂದೇ ಹೆಸರಾದ ನರಗುಂದ ಪಟ್ಟಣದಲ್ಲಿ ಮಹದಾಯಿ ನದಿ ನೀರಿಗಾಗಿ ರೈತರು ನಡೆಸುತ್ತಿರುವ ನಿರಂತರ ಧರಣಿ ಸತ್ಯಾಗ್ರಹ ಮಂಗಳವಾರ (ಏ.10) ಒಂದು ಸಾವಿರ ದಿನಗಳನ್ನು ಪೂರೈಸಲಿದ್ದು, ಹೊಸ ಇತಿಹಾಸ ಬರೆಯಲಿದೆ.

1858ರ ಭಾಸ್ಕರರಾವ್‌ ಭಾವೆ (ನರಗುಂದ ಬಾಬಾಸಾಹೇಬ) ಅವರು ಬ್ರಿಟಿಷರ ವಿರುದ್ಧ ನಡೆಸಿದ ಬಂಡಾಯ, 1980ರ ರೈತ ಬಂಡಾಯ ಸೇರಿದಂತೆ ಇದುವರೆಗೆ ನರಗುಂದ ಪಟ್ಟಣವು ಐತಿಹಾಸಿಕ ಹೋರಾಟಗಳನ್ನು ಕಂಡಿದೆ. ರೈತ ಸೇನೆ ರಾಜ್ಯ ಘಟಕ ಹಾಗೂ ಮಹದಾಯಿ, ಕಳಸಾ–ಬಂಡೂರಿ ಹೋರಾಟದ ಸಮನ್ವಯ ಸಮಿತಿಯು 2 ವರ್ಷ 270 ದಿನಗಳಿಂದ ಇಲ್ಲಿ ನಿರಂತರ ಹೋರಾಟ ನಡೆಸುತ್ತಿದೆ.

ಇನ್ನು 95 ದಿನಗಳು ಕಳೆದರೆ ಮಹದಾಯಿ ಹೋರಾಟ 3 ವರ್ಷ ಪೂರೈಸಲಿದೆ.

ADVERTISEMENT

ರೈತ ಸೇನೆ ರಾಜ್ಯ ಘಟಕ ಅಧ್ಯಕ್ಷ ವೀರೇಶ ಸೊಬರದಮಠ ಹಾಗೂ ಶಂಕ್ರಣ್ಣ ಅಂಬಲಿ ಜತೆಯಾಗಿ ರೈತ ಹುತಾತ್ಮ ವೀರಪ್ಪ ಕಡ್ಲಿಕೊಪ್ಪ ಅವರ ವೀರಗಲ್ಲಿನ ಸಮೀಪ 2015ರ ಜುಲೈ 16ರಂದು ಧರಣಿ ಆರಂಭಿಸಿದರು. ನಂತರದ ದಿನಗಳಲ್ಲಿ ಇದು ಜನಾಂದೋಲನವಾಗಿ ಬದಲಾಯಿತು. ಸಾಮಾನ್ಯ ರೈತರು, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ನಾಯಕರು, ಸಂಘಟನೆಗಳು, ಚಿತ್ರರಂಗದ ಪ್ರಮುಖರು, ಮಠಾಧೀಶರು ಇದಕ್ಕೆ ಬೆಂಬಲ ಸೂಚಿಸಿದರು.

ವಿಧಾನಸಭೆ ಚುನಾವಣೆ ಘೋಷಣೆಯಾದ ನಂತರ ಹೋರಾಟ ಸಮಿತಿಯಲ್ಲಿ ಸ್ವಲ್ಪ ಒಡಕು ಉಂಟಾದಂತೆ ಕಂಡು ಬಂದಿದ್ದು, ಕೆಲವರು ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವು ಹೋರಾಟಗಾರರು ರಾಜಕೀಯ ಬೇಡ. ರೈತ ಹೋರಾಟದ ಮೂಲಕವೇ ನೀರು ಪಡೆಯೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

**

ಸಾವಿರ ದಿನಗಳ ಮಹದಾಯಿ ಹೋರಾಟ ಜನಪ್ರತಿನಿಧಿಗಳಲ್ಲಿ ನಡುಕ ಹುಟ್ಟಿಸಿದೆ. ಹೋರಾಟದ ಹೆಸರು ಹೇಳಿಕೊಂಡು ಚುನಾವಣೆ ಸ್ಪರ್ಧಿಸುವುದು ಸರಿಯಲ್ಲ.

-ವೀರೇಶ ಸೊಬರದಮಠ, ರೈತಸೇನೆ ರಾಜ್ಯ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.