ಅರಸೀಕೆರೆ: ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಪತ್ನಿ ಡಾಟಿ ಅವರು ಪ್ರಯಾಣಿಸುತ್ತಿದ್ದ ಕಾರು ತಾಲ್ಲೂಕಿನ ಗಂಡಸಿ ಹೋಬಳಿ ಮುದುಡಿ ಗ್ರಾಮದಲ್ಲಿ ಬಳಿ ಶುಕ್ರವಾರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಡಾಟಿ ಅವರು ಅಪಾಯದಿಂದ ಪಾರಾಗಿದ್ದಾರೆ.
ಡಾಟಿ ಇದ್ದ ಕಾರಿಗೆ ಅರಸೀಕೆರೆ- ಚನ್ನರಾಯಪಟ್ಟಣದ ರಸ್ತೆಯ ಮುದುಡಿ ಗ್ರಾಮದ ಬಳಿ ಕರುವೊಂದು ಅಡ್ಡಬಂತು. ಕಾರು ಕರುವಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ಬ್ರೇಕ್ ಹಾಕಿದ. ಕಾರ್ನ ಹಿಂಬದಿಯ ಸೀಟಿನಲ್ಲಿ ಕುಳಿತಿದ್ದ ಡಾಟಿ ಅವರು ಮುಂದಿನ ಸೀಟಿಗೆ ಮುಗ್ಗರಿಸಿದ್ದರಿಂದ ಅವರ ಪಕ್ಕೆಗೆ ತರಚಿದ ಗಾಯವಾಯಿತು.
ಅಇತುಇವಾಯಿತು. ಅಲ್ಲದೆ ಕಾರು ದಿಢೀರನೆ ನಿಂತಿದ್ದರಿಂದ ಹಿಂದೆ ಬರುತ್ತಿದ್ದ ಪೈಲೆಟ್ ಜೀಪ್ ಮುಂದಿನ ಕಾರಿಗೆ ಡಿಕ್ಕಿ ಹೊಡೆಯಿತು. ಇದರಿಂದ ಕಾರಿನ ಹಿಂಭಾಗಕ್ಕೆ ಸ್ವಲ್ಪ ಮಟ್ಟಿನ ಹಾನಿಯಾಗಿದೆ. ಗಾಯಗೊಂಡಿದ್ದ ಡಾಟಿ ಅವರನ್ನು ಅರಸೀಕೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಸ್ವಲ್ಪಕಾಲ ವಿಶ್ರಾಂತಿ ಪಡೆದ ಅವರು ಮಧ್ಯಾಹ್ನ 1.15ರ ಸಮಯದಲ್ಲಿ ಚಿಕ್ಕಮಗಳೂರಿನತ್ತ ಪ್ರಯಾಣ ಮುಂದುವರಿಸಿದರು. ಚಿಕ್ಕಮಗಳೂರಿನ ನರಸಿಂಹರಾಜಪುರದಲ್ಲಿ ಲೋಕಸಭಾ ಉಪ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರನ್ನು ನೋಡಲು ಡಾಟಿ ಅವರು ಹೋಗುತ್ತಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.