ADVERTISEMENT

ಸಿಎಂ ಮನೆಯಲ್ಲಿ ಕಾಂಗ್ರೆಸ್ ನಾಯಕರು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 19:30 IST
Last Updated 13 ಫೆಬ್ರುವರಿ 2011, 19:30 IST

ಸಾಲಿಗ್ರಾಮ: ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆಯಲ್ಲಿ ಕುಳಿತು ಡಿನೋಟಿಫಿಕೇಶನ್  ಮಾಡಿಸಿಕೊಳ್ಳುವ ಕಾಂಗ್ರೆಸ್ ಪಕ್ಷದ ಮುಖಂಡರಿಂದಾಗಿ ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಆಳ್ವಿಕೆ ನಡೆಸುತ್ತಿದೆ’  ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾನುವಾರ ಲೇವಡಿ ಮಾಡಿದರು.

ಕೆ.ಆರ್.ನಗರ ತಾಲ್ಲೂಕಿನ ದಮ್ಮನಹಳ್ಳಿಯಲ್ಲಿ ಬಸವೇಶ್ವರ ದೇವಾಲಯವನ್ನು ಉದ್ಟಾಟಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ‘ರಾಜ್ಯದಲ್ಲಿ ಕೋಮುವಾದಿ ಪಕ್ಷ ಬೆಳೆಯಲು ಕಾಂಗ್ರೆಸ್  ಪಕ್ಷವೇ ಕಾರಣವಾಗಿದೆ. ಕಾಂಗ್ರೆಸ್ ಪಕ್ಷದ ಮುಖಂಡರು ಮೊದಲು ಬಣ್ಣ ಹಾಕಿ ಕೊಳ್ಳುವುದನ್ನು ಬಿಡಬೇಕು’ ಎಂದು ವ್ಯಂಗ್ಯವಾಡಿದರು.

‘ಮೈಸೂರು- ಕೊಡಗು ಸಂಸದ ಎಚ್.ವಿಶ್ವನಾಥ್ ಅವರಿಗೆ ಜೆಡಿಎಸ್ ಬಗ್ಗೆ ಮಾತನಾಡಲು ಯಾರ  ಅಧಿಕಾರ ನೀಡಿದ್ದು ಎಂದು ಗೊತ್ತಿಲ್ಲ. ಒಂದು ವೇಳೆ ಮಾತನಾಡಲು ಮುಂದಾದರೆ ಅವರಿಗೆ ನೈತಿಕತೆ ಇಲ್ಲ  ಎಂದು ಭಾವಿಸುತ್ತೇನೆ’ ಎಂದು ಟೀಕಿಸಿದರು.

‘ವಿಶ್ವನಾಥ್ ಅವರ ರಾಜಕೀಯ ತಂತ್ರಗಾರಿಕೆ ರೂಪಿಸಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು  ಜೆಡಿಎಸ್ ಪಕ್ಷವನ್ನು ಬಿಡುವಂತೆ ಆಯಿತು. ಇದರಿಂದ ಅವರು ರಾಜಕೀಯವಾಗಿ ನೆಲ ಕಚ್ಚುವ ಸ್ಥಿತಿ ಎದುರಾ ಗಿದೆ’ ಎಂದು ಗೇಲಿ ಮಾಡಿದರು. ಮೈಸೂರು ಸಂಸದರು ನನಗೆ ಶನಿ ಎಂದು ಕರೆದಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಅವರಿಗೆ ಶನಿಯಾಗುವೆ’ ಎಂದು ಮಾರ್ಮಿಕವಾಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.