ADVERTISEMENT

ಸಿಎಜಿ ವರದಿ ಅಂತಿಮವಲ್ಲ: ಮೊಯಿಲಿ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2012, 19:30 IST
Last Updated 18 ಆಗಸ್ಟ್ 2012, 19:30 IST

ಬೆಂಗಳೂರು:  `ಕಲ್ಲಿದ್ದಲು ನಿಕ್ಷೇಪ ಹರಾಜು ಕುರಿತ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಉಲ್ಲೇಖಿಸಿರುವುದು ಕೇವಲ ನಷ್ಟದ ಅಂದಾಜು ಮಾತ್ರವೇ ಹೊರತು, ಇದು ವಾಸ್ತವವಾಗಿ ಸರ್ಕಾರದ ಬೊಕ್ಕಸಕ್ಕೆ ಆದ ನಷ್ಟವಲ್ಲ. ಈ ವಿಷಯದಲ್ಲಿ ಸಿಎಜಿ ವರದಿಯೇ ಅಂತಿಮ ತೀರ್ಪಲ್ಲ~ ಎಂದು ಕೇಂದ್ರ ಇಂಧನ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.

ನಗರದಲ್ಲಿ ಶನಿವಾರ ನಡೆದ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ದಕ್ಷಿಣ ಭಾರತ ಪ್ರಾದೇಶಿಕ ಪರಿಷತ್ತಿನ 44ನೇ ಪ್ರಾದೇಶಿಕ ಸಮಾವೇಶದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

`ಕಲ್ಲಿದ್ದಲು ನಿಕ್ಷೇಪ ಹರಾಜಿನ ವಿಷಯದಲ್ಲಿ ಸರ್ಕಾರದ ತಪ್ಪು ನೀತಿಗಳಿಂದಾಗಿ ದೇಶದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಸಿಎಜಿ ವರದಿ ಹೇಳಿದೆ. ಆದರೆ, 2004ರಲ್ಲಿ ನಡೆದ ಹರಾಜು ಪ್ರಕ್ರಿಯೆ ಪಾರದರ್ಶಕವಾಗಿಯೇ ನಡೆದಿದೆ. 2004ರ ಸಮಯದಲ್ಲಿ ಇದ್ದ ಗುತ್ತಿಗೆ ಮೌಲ್ಯದಂತೆ ನಿಕ್ಷೇಪ ಹರಾಜು ನಡೆದಿದೆ.

ಸ್ಪರ್ಧಾತ್ಮಕ ಬೆಲೆಗೆ ಗುತ್ತಿಗೆ ನೀಡಿದ್ದರೆ ಇನ್ನೂ ಹೆಚ್ಚಿನ ಲಾಭವಾಗುತ್ತಿತ್ತು ಎಂಬ ಅಂದಾಜಿನ ಮೌಲ್ಯದ ಆಧಾರದ ಮೇಲೆ ಸಿಎಜಿ ವರದಿ ನೀಡಿದೆಯೇ ಹೊರತು, ವಾಸ್ತವವಾಗಿ ಇದರಿಂದ ಸರ್ಕಾರದ ಬೊಕ್ಕಸಕ್ಕೆ ಯಾವುದೇ ನಷ್ಟವಾಗಿಲ್ಲ~ ಎಂದರು.

`ಕಲ್ಲಿದ್ದಲು ನಿಕ್ಷೇಪ ಹರಾಜಿನ ವಿಷಯದಲ್ಲಿ ಮಹಾ ಹಗರಣ ನಡೆದಿದೆ ಎಂದು ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ಈ ವಿಷಯದಲ್ಲಿ ಪ್ರಧಾನಿ ಸಿಂಗ್ ಅವರನ್ನು ಬಲಿಪಶು ಮಾಡಲು ವಿರೋಧ ಪಕ್ಷಗಳು ಹುನ್ನಾರ ನಡೆಸಿವೆ. ದೇಶದ ಸಂಸತ್ತಿಗೆ ಇರುವ ಪರಮಾಧಿಕಾರವನ್ನು ಪ್ರಶ್ನಿಸುವುದು ಹಾಗೂ ಪ್ರಧಾನಿ ಸ್ಥಾನದ ಬಗ್ಗೆ ಮನಸ್ಸಿಗೆ ಬಂದಂತೆ ಆರೋಪ ಮಾಡುವುದು ಸರಿಯಲ್ಲ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.