ಬೆಂಗಳೂರು: 2010ರಲ್ಲಿ ನಡೆದ ಕೇಂದ್ರ ನಾಗರಿಕ ಸೇವೆಗಳ ಪರೀಕ್ಷೆ ಎದುರಿಸಿದ್ದ ನಗರದ ಟಿ.ಯು. ಶ್ರೀನಿವಾಸ್ ಅವರ ಉತ್ತರ ಪತ್ರಿಕೆಗಳ ಪ್ರತಿಯನ್ನು ನೀಡುವಂತೆ ಕೇಂದ್ರ ಮಾಹಿತಿ ಆಯೋಗ ನೀಡಿರುವ ಆದೇಶವನ್ನು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಪಾಲಿಸಿಲ್ಲ. ಯುಪಿಎಸ್ಸಿಯ ಧೋರಣೆಯನ್ನು ಪ್ರಶ್ನಿಸಿ ಕಾನೂನು ಹೋರಾಟ ನಡೆಸಲು ಅವರು ಮುಂದಾಗಿದ್ದಾರೆ.
ಶ್ರೀನಿವಾಸ್ 2010ರಲ್ಲಿ ಯುಪಿಎಸಿ ನಡೆಸಿದ ಐಎಎಸ್ ಮುಖ್ಯ ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ ಅವರಿಗೆ ನಿರೀಕ್ಷೆಗಿಂತ ಕಡಿಮೆ ಅಂಕಗಳು ಬಂದಿದ್ದವು. ಮಾಹಿತಿ ಹಕ್ಕು ಕಾಯ್ದೆಯಡಿ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದ ಅವರು, ತಮ್ಮ ಉತ್ತರ ಪತ್ರಿಕೆಗಳ ಪ್ರತಿ ನೀಡುವಂತೆ ಮನವಿ ಮಾಡಿದ್ದರು.
ಉತ್ತರ ಪತ್ರಿಕೆಗಳ ಪ್ರತಿ ನೀಡಲು ಯುಪಿಎಸ್ಸಿ ನಿರಾಕರಿಸಿತು. ಇದನ್ನು ಪ್ರಶ್ನಿಸಿ, ಶ್ರೀನಿವಾಸ್ ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಮೆಟ್ಟಿಲೇರಿದರು. ದೂರಿನ ವಿಚಾರಣೆ ನಡೆಸಿದ ಆಯೋಗ ಅಕ್ಟೋಬರ್ 5ರಂದು ನೀಡಿದ ಆದೇಶದಲ್ಲಿ, `ಉತ್ತರ ಪತ್ರಿಕೆಗಳನ್ನು ಮಾಹಿತಿ ಹಕ್ಕು ಕಾಯ್ದೆಯ ಅಡಿ ನೀಡಬಹುದು ಎಂದು ಹಲವಾರು ಪ್ರಕರಣಗಳಲ್ಲಿ ವಿವಿಧ ನ್ಯಾಯಾಲಯಗಳು ಆದೇಶಿಸಿವೆ. ಹಾಗಾಗಿ, ಆಯೋಗದ ಆದೇಶ ದೊರೆತ ಹತ್ತು ದಿನಗಳಲ್ಲಿ ಶ್ರೀನಿವಾಸ್ ಅವರಿಗೆ ಉತ್ತರ ಪತ್ರಿಕೆಗಳ ಪ್ರತಿ ನೀಡಬೇಕು~ ಎಂದು ಯುಪಿಎಸ್ಸಿಗೆ ನಿರ್ದೇಶನ ನೀಡಿದೆ.
`ಆಯೋಗದ ಸ್ಪಷ್ಟ ನಿರ್ದೇಶನ ಇದ್ದರೂ, ಯುಪಿಎಸ್ಸಿ ನನಗೆ ಈವರೆಗೂ ಉತ್ತರ ಪತ್ರಿಕೆಗಳ ಪ್ರತಿ ಒದಗಿಸಿಲ್ಲ. ಇದನ್ನು ಪ್ರಶ್ನಿಸಿ ನ್ಯಾಯಾಲಯ ಅಥವಾ ಪುನಃ ಆಯೋಗದ ಮೊರೆ ಹೋಗುತ್ತೇನೆ~ ಎಂದು ಶ್ರೀನಿವಾಸ್ `ಪ್ರಜಾವಾಣಿ~ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.