ಬೆಂಗಳೂರು: ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ ಬಿ. ಅಡಿ ಅವರು ಶುಕ್ರವಾರದವರೆಗೆ ರಜೆ ಪಡೆದಿದ್ದಾರೆ. ‘ಅವರು ರಜೆ ಪಡೆದಿದ್ದಾರಷ್ಟೆ. ಕರ್ತವ್ಯದಿಂದ ಹಿಂದೆ ಸರಿದಿಲ್ಲ’ ಎಂದು ನ್ಯಾಯಮೂರ್ತಿ ಅಡಿ ಕಚೇರಿ ಮೂಲಗಳು ತಿಳಿಸಿವೆ.
‘ನ್ಯಾಯಮೂರ್ತಿ ಅಡಿ ಅವರ ಪದಚ್ಯುತಿ ಪ್ರಸ್ತಾವನೆಯನ್ನು ಒಪ್ಪಿಕೊಂಡು, ಅದನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರಿಗೆ ಕಳುಹಿಸಲಾಗಿದೆ. ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ಕಾಯ್ದೆ – 2015ರ ಅನುಸಾರ ಅವರು ಕರ್ತವ್ಯ ನಿರ್ವಹಿಸುವಂತಿಲ್ಲ’ ಎಂಬ ಪತ್ರವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ಲೋಕಾಯುಕ್ತ ಹಂಗಾಮಿ ರಿಜಿಸ್ಟ್ರಾರ್ ಆರ್.ಎಸ್. ಪಾಟೀಲ ಅವರಿಗೆ ಶುಕ್ರವಾರ ಬರೆದಿತ್ತು.
ಇಲಾಖೆಯಿಂದ ಬಂದ ಪತ್ರದ ವಿಚಾರವಾಗಿ ಪಾಟೀಲ ಅವರು ಒಂದನೆಯ ಉಪ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಆನಂದ ಅವರ ಜೊತೆ ಸೋಮವಾರ ಮಾತುಕತೆ ನಡೆಸಿದರು ಎಂದು ಗೊತ್ತಾಗಿದೆ. ‘ನ್ಯಾಯಮೂರ್ತಿ ಅಡಿ ಅವರು ಕರ್ತವ್ಯ ನಿರ್ವಹಿಸುವಂತೆ ಇಲ್ಲ ಎಂಬುದನ್ನು ನ್ಯಾಯಮೂರ್ತಿ ಆನಂದ ಅವರಿಗೂ ತಿಳಿಸಿ’ ಎಂದು ಇಲಾಖೆ ಪತ್ರದಲ್ಲಿ ಹೇಳಲಾಗಿತ್ತು.
‘ಪತ್ರ ಆಧರಿಸಿ ಕೈಗೊಂಡಿರುವ ಕ್ರಮದ ಬಗ್ಗೆ ಇಲಾಖೆಗೆ ಮಾಹಿತಿ ನೀಡಲಾಗುವುದು’ ಎಂದು ಲೋಕಾಯುಕ್ತ ಅಧಿಕಾರಿಯೊಬ್ಬರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.