ಬೆಂಗಳೂರು: ಕೆಲ ತಿಂಗಳ ಹಿಂದೆ ಮುಂಬೈನ ಥಾಣೆಯಲ್ಲಿ ನಡೆದ ಮರಾಠಿ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಕನ್ನಡಿಗರೇ ಆದ ಸಿರಗುಪ್ಪ ಕಡೆಯ ಉತ್ತಮ ಕಾಂಬ್ಲೆ ಎಂಬುವವರು ಆಯ್ಕೆಯಾಗಿದ್ದರು. ಅವರು ತಮ್ಮ ಭಾಷಣದಲ್ಲಿ ಮಹಾರಾಷ್ಟ್ರಕ್ಕೆ ಅನ್ಯಾಯ ಆಗಿದೆ, ಕನ್ನಡದ ಸರ್ಕಾರವು ಮಹಾರಾಷ್ಟ್ರೀಯರಿಗೆ ಕಿರುಕುಳ ಕೊಡುತ್ತಿದೆ, ಬೆಳಗಾವಿ ಮತ್ತಿತರ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಬೇಕು, ಅದಕ್ಕಾಗಿ ಉಗ್ರವಾಗಿ ಹೋರಾಡಬೇಕು ಎಂಬಿತ್ಯಾದಿಯಾಗಿ ಭಾಷಣ ಮಾಡಿದರು. ಇಂಥ ಸುಳ್ಳು ಹೇಳಿಕೆಗಳನ್ನು ಕರ್ನಾಟಕದಲ್ಲಿರುವ ಮರಾಠಿಗರು ವಿರೋಧಿಸಬೇಕು ಎಂದು ಸಮ್ಮೇಳಾನಾಧ್ಯಕ್ಷ ಪ್ರೊ.ಜಿ.ವೆಂಕಟಸುಬ್ಬಯ್ಯ ಹೇಳಿದರು.
ಕನ್ನಡ ನಾಡು ಈಗಾಗಲೇ ಕಾಸರಗೋಡನ್ನು ಕಳೆದುಕೊಂಡಿದೆ. ಇಂಥ ಸಂದರ್ಭದಲ್ಲಿ ಬೆಳಗಾವಿ ಮತ್ತಿತರ ಪ್ರದೇಶಗಳನ್ನು ಕಬಳಿಸುವ ಮಾತುಗಳಿಂದ ಗಡಿಭಾಗದಲ್ಲಿ ಅಸ್ಥಿರತೆ ತಲೆದೋರುತ್ತಿದೆ. ಅಚ್ಚಗನ್ನಡ ಪ್ರದೇಶಗಳನ್ನು ನುಂಗಲು ಇಷ್ಟಪಡುವ ಆಕ್ರಮಣಶೀಲ ಪೇಶ್ವಾಯಿ ಬುದ್ಧಿಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.