ಮಂಡ್ಯ: ಅಮೆರಿಕದ ಪಿಟ್ಸ್ಬರ್ಗ್ನಲ್ಲಿ ಮೇ 13ರಿಂದ 18ರ ವರೆಗೆ ನಡೆದ ಅಂತರರಾಷ್ಟ್ರೀಯ ವಿಜ್ಞಾನ ಸ್ಪರ್ಧೆಯಲ್ಲಿ ಶ್ರೀರಂಗಪಟ್ಟಣದ ಸಿ.ಎಸ್. ಮೊಹಮದ್ ಸುಹೇಲ್ ತಂಡಕ್ಕೆ ದ್ವಿತೀಯ ಬಹುಮಾನ (ಅಂತರರಾಷ್ಟ್ರೀಯ ಗ್ರ್ಯಾಂಡ್ ಅವಾರ್ಡ್) ಬಂದಿದೆ.
‘ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿರುವ ಸುಹೇಲ್ ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜು ವಿದ್ಯಾರ್ಥಿ ಸ್ವಸ್ತಿಕ್ ಪದ್ಮ ಅವರು ಭಾರತವನ್ನು ಪ್ರತಿನಿಧಿಸಿದ್ದರು ಎಂದು ಸುಹೇಲ್ ತಂದೆ, ಕವಿ ಅನಾರ್ಕಲಿ ಸಲೀಂ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಕಲುಷಿತ ನೀರು, ಮಾನವ ನಡಿಗೆ, ಶಬ್ದದ ಶಕ್ತಿಯಿಂದ ವಿದ್ಯುತ್ ಉತ್ಪಾದನೆ ಕುರಿತು ಪ್ರಯೋಗ ನಡೆಸಿದ್ದರು. ಪ್ರಶಸ್ತಿ ಪತ್ರ, ಪದಕ ಹಾಗೂ ತಲಾ ₹ 55 ಸಾವಿರ ಬಹುಮಾನ ಪಡೆದಿದ್ದಾರೆ. ಈ ಸಾಧನೆಯನ್ನುಸ್ಮರಣೀಯವಾಗಿಸಲು ಸಿ.ಎಸ್.ಸುಹೇಲ್ ಹೆಸರನ್ನು ಒಂದು ಉಪಗ್ರಹಕ್ಕೆ ನಾಮಕರಣ ಮಾಡುವ ನಿರ್ಧಾರವನ್ನು ಅಲ್ಲಿನ ಎಸ್ಎಎಂವಿಐಡಿ ಶಿಕ್ಷಣ ಸಂಸ್ಥೆ ಕೈಗೊಂಡಿದೆ ಎಂದು ಹೇಳಿದರು.
2017ನೇ ಸಾಲಿನಲ್ಲಿ ಕೇಂದ್ರ ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆ ವತಿಯಿಂದ ದೆಹಲಿಯಲ್ಲಿ ನಡೆದ ಐರಿಷ್ ರಾಷ್ಟ್ರೀಯ ವಿಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದರು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.