ADVERTISEMENT

ಸೈಮರ್ನ ಕೊನೆಯ ನುಡಿ!

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 19:30 IST
Last Updated 17 ಜುಲೈ 2012, 19:30 IST

ಮೈಸೂರು: ಈ ಭಾಷೆ ಮಾತಾಡುವವರ ಸಂಖ್ಯೆ ಕೇವಲ ನಾಲ್ಕು. ಇನ್ನು ಕೆಲವೇ ವರ್ಷಗಳಲ್ಲಿ ಇವರೊಂದಿಗೇ ಅದು ಜಗತ್ತಿನಿಂದ ನಿರ್ಗಮಿಸುವುದು ಖಚಿತ!ತ್ರಿಪುರ ರಾಜ್ಯದ ಬುಡಕಟ್ಟು ಭಾಷೆಗಳಲ್ಲಿ ಒಂದಾದ `ಸೈಮರ್~ನ ಕಥೆ-ವ್ಯಥೆ ಇದು. ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ಕೇವಲ ನಾಲ್ಕು ಮಾತ್ರ ಎಂದು ಮೈಸೂರಿನ  ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ (ಸಿಐಐಎಲ್) ಅಧಿಕೃತವಾಗಿ ಘೋಷಿಸಿದೆ.

ಕೊನೆಯುಸಿರೆಳೆಯುತ್ತಿರುವ ಈ  ಭಾಷೆಯ ಅಂತಿಮ ಕೊಂಡಿಯಾಗಿರುವ 70 ವರ್ಷದ ಸುಕೃತಾಂಗ್ ಸೈಮರ್ ಅವರನ್ನು ಸಿಐಐಎಲ್ ತಂಡವು ಇಲ್ಲಿಗೆ ಕರೆದುಕೊಂಡು ಬಂದಿದೆ.  ಭಾಷೆಯಲ್ಲಿರುವ ಜ್ಞಾನ, ಜನಪದ, ಆಚಾರ, ವಿಚಾರಗಳನ್ನು ದಾಖಲಿಸಿಡಲು ಅವರ ಸಹಾಯ ಪಡೆಯಲಿದೆ. ತ್ರಿಪುರ ರಾಜ್ಯದ ದಲಾಯ್ ಜಿಲ್ಲೆಯ ಘಂಟಾಚಲ್ ಕುಗ್ರಾಮದಲ್ಲಿರುವ `ಹಲಂ~ ಜನಾಂಗದಲ್ಲಿ `ಸೈಮರ್~ ಉಪಪಂಗಡದ ವ್ಯಕ್ತಿ ಆತ.  ಸದ್ಯ ಈ ಭಾಷೆ ಮಾತನಾಡುವ ನಾಲ್ಕು ಕುಟುಂಬಗಳಲ್ಲಿ ಸುಕೃತಾಂಗ ಹಿರಿಯ ವ್ಯಕ್ತಿ.

ತ್ರಿಪುರಾದ ಬೊರಕ್ ಕುಕುಬೈ ಬೊಸಾಂಗ್ ಸರ್ಕಾರೇತರ ಸಂಸ್ಥೆಯ ಅಧ್ಯಕ್ಷ ನಂದಕುಮಾರ್ ದೇವವರ್ಮ ಅವರು ಭಾಷಾ ಮಂದಾಕಿನಿ ಕಾರ್ಯದ ಅಂಗವಾಗಿ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ. ಅವರು ಸಿಐಐಎಲ್‌ಗೆ ಈ ಸಂಗತಿಯನ್ನು ತಿಳಿಸಿದ ನಂತರ ಸೈಮರ್ ಭಾಷೆಯ ಅಧ್ಯಯನ ಆರಂಭಗೊಳ್ಳಲಿದೆ.

ಸುಕೃತಾಂಗ್‌ಗೆ ಸೈಮರ್ ಭಾಷೆ ಹೊರತುಪಡಿಸಿ ಬೇರೆ ಯಾವುದೇ ಭಾಷೆ ಬರುವುದಿಲ್ಲ. ಅವರ ಭಾವನೆ ಮತ್ತು ತಮ್ಮ ಸಂಶೋಧನೆಯ ಕುರಿತು ನಂದಕುಮಾರ್ ವಿವರಿಸಿದ ಅಂಶಗಳು ಇಲ್ಲಿವೆ;

ಸೈಮರ್ ಕುಟುಂಬಗಳು ಕೂಲಿ ಮಾಡಿಕೊಂಡು ಜೀವನ ಸಾಗಿಸುವವರು. ಬಡತನ ರೇಖೆಗಿಂತ ಕೆಳಗಿರುವ ಈ ಜನಾಂಗವು ಅಳಿವಿನಂಚಿಗೆ ತಲುಪಲು ಸಾಮಾಜಿಕ, ಆರ್ಥಿಕ, ಆಧುನಿಕ ಕಾರಣಗಳಿವೆ.  2009ರಲ್ಲಿ 25 ಮಂದಿ ಈ ಭಾಷೆ ಬಳಕೆ ಮಾಡುತ್ತಿದ್ದರು. ಇದೀಗ ಕೇವಲ ನಾಲ್ಕೇ ಜನರು ಸೈಮರ್ ಭಾಷೆ ಬಳಸುತ್ತಿದ್ದಾರೆ. ಬಡತನದ ಕಾರಣದಿಂದ ದೂರದ ಊರುಗಳಿಗೆ ಉದ್ಯೋಗ ಅರಸಿ ಹಲವರು ಹೋಗಿದ್ದು, ವಿದ್ಯಾಭ್ಯಾಸಕ್ಕಾಗಿ ಕೆಲವರು ತಮ್ಮ ಮೂಲಸ್ಥಾನ ತೊರೆದಿದ್ದಾರೆ. ಲಿಂಗಾನುಪಾತದಲ್ಲಿ ಅಸಮತೋಲನವಾಗಿದ್ದು ಸೈಮರ್ ಭಾಷೆಯ ಅಳಿವಿಗೆ ಮುಖ್ಯ ಕಾರಣಗಳು.

ಸೈಮರ್ ಭಾಷೆ ಬಳಕೆ ಮಾಡುತ್ತಿದ್ದವರು ಚದುರಿ ಹೋಗಿದ್ದಾರೆ.  ಈ ಜನಾಂಗದ ವ್ಯಕ್ತಿಯೊಬ್ಬ ಮದುವೆಯಾಗುವ ಮಹಿಳೆ ಮತ್ತೊಂದು ಭಾಷೆ  ಮಾತನಾಡುತ್ತಾಳೆ. ಇವರಿಗೆ ಜನಿಸುವ ಮಗು ಇನ್ನೊಂದು ಭಾಷೆಯನ್ನು ಕಲಿಯುತ್ತದೆ. ಹೀಗಾಗಿ ಸೈಮರ್ ಭಾಷೆ ಗೊತ್ತಿರುವ ಮಂದಿ ಮಾತ್ರ ಪರಸ್ಪರ ಮಾತನಾಡಿಕೊಳ್ಳುತ್ತಾರೆ. ಇದೀಗ ವಲಸೆ ಹೆಚ್ಚಳವಾಗಿರುವುದರಿಂದ ಈ ರೂಢಿಯೂ ತಪ್ಪಿಹೋಗಿದೆ.

ಹಲಂ ಜನಾಂಗದಲ್ಲಿ ಹಲವು ಉಪಪಂಗಡಗಳಿದ್ದು, ಪ್ರತಿಯೊಂದರಲ್ಲಿಯೂ ವಿವಿಧ ಶೈಲಿಗಳ ಭಾಷಾ ಬಳಕೆಯಿದೆ. ಅವುಗಳಲ್ಲಿ ಸ್ವಲ್ಪಮಟ್ಟಿನ ಅಂತರವಿದೆ. ಆದರೆ ಅಪ್ಪಟ ಸೈಮರ್ ಭಾಷೆಯನ್ನು ಅರ್ಥ ಮಾಡಿಕೊಳ್ಳುವವರೂ ಕಡಿಮೆಯಾಗುತ್ತಿದ್ದಾರೆ. ಉದ್ಯೋಗ, ವಿವಾಹ ಕಾರಣಗಳಿಗಾಗಿ ಸೈಮರ್ ಜನಾಂಗದ ಹಲವರು ಇನ್ನಿತರ ಪಂಗಡಗಳಿಗೆ ಮತಾಂತರಗೊಂಡಿದ್ದಾರೆ. 

ಅರಣ್ಯದಲ್ಲಿಯೇ ಬದುಕುವ ಈ ಜನಾಂಗವು ಮೂಲತಃ ಮಾಂಸಾಹಾರಿಗಳಾದರೂ, ರೊಟ್ಟಿ, ಚಪಾತಿಯಂತಹ ಪದಾರ್ಥಗಳನ್ನು ಸೇವಿಸುವುದಿಲ್ಲ. ಅನ್ನವೇ ಮುಖ್ಯ ಆಹಾರ. ಈ ಪಂಗಡದಲ್ಲಿಯೂ ಹಲವು ಜನಪದ ಗೀತೆಗಳು, ಆಚರಣೆಗಳು ಇವೆ. ತ್ರಿಪುರಾದಲ್ಲಿ ನಮ್ಮ ಸಮೀಕ್ಷೆಯ ಪ್ರಕಾರ 50 ಭಾಷೆಗಳಿವೆ. ಈಗಾಗಲೇ ಅಳಿದು ಹೋದ ಭಾಷೆಗಳ ಕುರಿತು ಹೆಚ್ಚು ಮಾಹಿತಿಯಿಲ್ಲ ಎಂದು ನಂದಕುಮಾರ್ ಹೇಳುತ್ತಾರೆ.

`ಭಾಷೆಯನ್ನಂತೂ ಉಳಿಸಿ ಬೆಳೆಸುವುದು ಕಷ್ಟ. ಆ ಭಾಷೆಯಲ್ಲಿರುವ ಜ್ಞಾನ, ಜನಪದ ಮತ್ತಿತರ ಸಂಗತಿಗಳನ್ನು ದಾಖಲಿಸಿ, ಮುಂದಿನ ಸಂಶೋಧಕರಿಗಾಗಿ ಇಡುವುದು ನಮ್ಮ ಉದ್ದೇಶ. ಯಾವುದೇ ಒಂದು ಭಾಷೆಯಲ್ಲಿ ಆಯಾ ಜನಾಂಗದ ಸಂಸ್ಕೃತಿ, ಪರಂಪರೆ, ಅಸ್ತಿತ್ವಗಳು ಇರುತ್ತವೆ~ ಎಂದು ಈಶಾನ್ಯ ರಾಜ್ಯಗಳ ಆದಿವಾಸಿ ಮತ್ತು ಅಳಿವಿನಂಚಿನ ಭಾಷೆಗಳ ಮುಖ್ಯಸ್ಥ ಡಾ.ದೇವಿಪ್ರಸಾದ್ ಶಾಸ್ತ್ರಿ ಹೇಳುತ್ತಾರೆ.

ತಮ್ಮ ಜನಾಂಗದ ಗತಿ ಏನಾಗಲಿದೆ ಎಂಬ ಕಹಿಸತ್ಯ ಗೊತ್ತಿದ್ದರೂ ಉಳಿಯುವಷ್ಟು ಉಳಿಯಲಿ ಉದ್ದೇಶದಿಂದ ಈಶಾನ್ಯ ರಾಜ್ಯದಿಂದ ದಕ್ಷಿಣದ ಮೈಸೂರಿಗೆ ಬಂದಿರುವ ಸುಕೃತಾಂಗ್  ಮಂಗಳವಾರ  ಸಿಐಐಎಲ್‌ನ ಸನ್ಮಾನ ಸ್ವೀಕರಿಸಿದ ನಂತರ `ನನ್ನ ಭಾಷೆ  ವಿನಾಶವಾಗಲಿದೆ. ನಾವು ಎಲ್ಲವನ್ನೂ ಕಳೆದುಕೊಳ್ಳಲಿದ್ದೇವೆ..ದೇಶವಾಸಿಗಳು ನಮ್ಮ ಕೈಹಿಡಿಯಬೇಕು..~ ಎಂದು ಕೂಗಿ ಹೇಳಿದ್ದು ಪ್ರತಿಧ್ವನಿಸುತ್ತಲೇ ಇತ್ತು.

ಪುತ್ರ ಸಂತಾನದ ಜನಾಂಗ !
ಅಳಿವಿನಂಚಿನಲ್ಲಿರುವ `ಸೈಮರ್~ ಬುಡಕಟ್ಟು ಜನಾಂಗದಲ್ಲಿ ಹೆಣ್ಣು ಮಕ್ಕಳ ಸಂತಾನವೇ ಇಲ್ಲ. ಅನುವಂಶಿಕ ಕಾರಣಗಳಿಂದಾಗಿ ಈ ಜನಾಂಗದಲ್ಲಿ ತಲೆತಲಾಂತರದಿಂದ ಕೇವಲ ಪುತ್ರಸಂತಾನವಿರುವುದೇ ಈ ಭಾಷೆ ಮತ್ತು ಜನಾಂಗದ ಅಳಿವಿಗೆ ಕಾರಣವಂತೆ!

ತ್ರಿಪುರಾದ ಬೊರಕ್ ಕುಕುಬೈ ಬೊಸಾಂಗ್ ಸರ್ಕಾರೇತರ ಸಂಸ್ಥೆಯ ಅಧ್ಯಕ್ಷ ನಂದಕುಮಾರ್ ದೇವವರ್ಮ ಉದಾಹರಣೆ ಸಮೇತ ಈ ಮಾತನ್ನು ಪುಷ್ಟಿಕರಿಸುತ್ತಾರೆ.`ಸುಕೃತಾಂಗ್ ಅವರ ತಾತನಿಗೆ ಒಬ್ಬ ಮಗ, ಅವರಿಗೆ ಸುಕೃತಾಂಗ್ ಏಕೈಕ ಪುತ್ರ, ಅವರಿಗೆ ಒಬ್ಬ ಮಗ ಮಾತ್ರ ಇದ್ದಾರೆ.

ಇದು ಸೈಮರ್‌ನ ಪ್ರತಿಯೊಂದು ಕುಟುಂಬದಲ್ಲಿಯೂ ಕಂಡುಬರುತ್ತಿರುವ ಆಶ್ಚರ್ಯದಾಯಕ ಸಂಗತಿ. ಇದರಿಂದಾಗಿ ಬೇರೆ ಪಂಗಡಗಳ ಹೆಣ್ಣುಮಕ್ಕಳನ್ನು ಮದುವೆಯಾಗಿ ಬರುವ ಸಂಪ್ರದಾಯ ಇಲ್ಲಿದ್ದು, ಕ್ರಮೇಣ ಇದು ಭಾಷೆಯ ಅಳಿವಿಗೂ ಕಾರಣವಾಗಿದೆ. ಇದು ನಮ್ಮ ಸಂಶೋಧನೆಯಲ್ಲಿ ಕಂಡುಬಂದಿರುವ ಅಂಶ. ಈ ಕುರಿತು ಇನ್ನೂ ಹೆಚ್ಚಿನ ಅಧ್ಯಯನ ಅಗತ್ಯವಿದೆ~ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.