ಶ್ರೀರಂಗಪಟ್ಟಣ: ಕಲ್ಲುಬಂಡೆ ಸಿಡಿಸಲು ಬಳಸುವ ಅಮೋನಿಯಂ ನೈಟ್ರೇಟ್ ಸಾಗಿಸುತ್ತಿದ್ದ ಆರೋಪದ ಮೇಲೆ ಕೆಆರ್ಎಸ್ ಪೊಲೀಸರು ಇಬ್ಬರನ್ನು ಮಂಗಳವಾರ ಕಟ್ಟೇರಿ ಬಳಿ ಬಂಧಿಸಿದ್ದಾರೆ.
ಪಾಂಡವಪುರದ ಜಕ್ರಿವುಲ್ಲಾ ಅಲಿಯಾಸ್ ಪಿ.ಪಾಷ, ಪ್ಯಾರೆಜಾನ್ ಅವರನ್ನು ಬಂಧಿಸಲಾಗಿದ್ದು, ಇವರಿಂದ ತಲಾ 50 ಕೆ.ಜಿ ತೂಕದ 25 ಚೀಲ ಅಮೋನಿಯಂ ನೈಟ್ರೇಟ್ ವಶಪಡಿಸಿಕೊಳ್ಳಲಾಗಿದೆ.
ಸ್ಫೋಟಕ ವಸ್ತು ಸಾಗಿಸುತ್ತಿದ್ದ ಬೊಲೆರೊ ವಾಹನ ಹಾಗೂ ವಾಹನದ ಮಾಲೀಕ ಯರಗನಹಳ್ಳಿ ಪ್ರಸನ್ನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತ ಜಕ್ರಿವುಲ್ಲಾ ಹಾಗೂ ಪ್ಯಾರಿಜಾನ್ ಪಾಂಡವಪುರದಿಂದ ಬನ್ನಂಗಾಡಿ ಸಮೀಪದ ಕಲ್ಲು ಗಣಿಗಳಿಗೆ ಸ್ಫೋಟಕ ವಸ್ತುವನ್ನು ಸಾಗಿಸುತ್ತಿದ್ದರು. ಖಚಿತ ಮಾಹಿತಿ ಆಧರಿಸಿ ಕೆಆರ್ಎಸ್ ಪೊಲೀಸ್ ಠಾಣೆ ಸಬ್ಇನ್ಸ್ಪೆಕ್ಟರ್ ಹರೀಶ್ಕುಮಾರ್ ಮತ್ತು ತಂಡ ವಾಹನ ತಡೆದು ಪರಿಶೀಲನೆ ನಡೆಸಿದಾಗ ಅಕ್ರಮವಾಗಿ ಸ್ಫೋಟಕ ವಸ್ತು ಸಾಗಿಸುತ್ತಿದ್ದ ಸಂಗತಿ ಬೆಳಕಿಗೆ ಬಂದಿದೆ. ಕೆಆರ್ಎಸ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.