ADVERTISEMENT

ಸ್ವಚ್ಛ ತಾಣ ಪಟ್ಟಿಯಲ್ಲಿ ಮಂತ್ರಾಲಯ ಮಠ

ಸಚಿವ ರಮೇಶ ಜಿಗಜಿಣಗಿ ಕಳುಹಿಸಿದ ಪತ್ರ

​ಪ್ರಜಾವಾಣಿ ವಾರ್ತೆ
Published 13 ಜೂನ್ 2018, 19:47 IST
Last Updated 13 ಜೂನ್ 2018, 19:47 IST

ರಾಯಚೂರು: ಕೇಂದ್ರದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಮೂರನೇ ಹಂತದಲ್ಲಿ ಆಯ್ಕೆ ಮಾಡಿರುವ ದೇಶದ 10 ಸ್ವಚ್ಛತಾ ತಾಣಗಳ ಪಟ್ಟಿಯಲ್ಲಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠವೂ ಸೇರ್ಪಡೆಯಾಗಿದೆ.

‘ಇಲಾಖೆಯಿಂದ ಎರಡು ಹಂತಗಳಲ್ಲಿ ಈಗಾಗಲೇ ಗುರುತಿಸಲಾಗಿರುವ 100ಕ್ಕೂ ಹೆಚ್ಚಿನ ಇಂತಹ ತಾಣಗಳಲ್ಲಿ ಮೂಲ ಸೌಕರ್ಯ ಒದಗಿಸಲಾಗಿದೆ’ ಎಂದು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ ಜಿಗಜಿಣಗಿ ಅವರು ಮಂತ್ರಾಲಯ ಮಠಕ್ಕೆ ಕಳುಹಿಸಿದ ಪತ್ರದಲ್ಲಿ ತಿಳಿಸಿದ್ದಾರೆ.

ಕುಡಿಯುವ ನೀರು, ಶೌಚಾಲಯ ನಿರ್ಮಾಣ ಸೇರಿದಂತೆ ವಿವಿಧ ಮೂಲ ಸೌಲಭ್ಯಗಳನ್ನು ಕ್ಷೇತ್ರದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಖಾಸಗಿ ಸಂಸ್ಥೆಗಳು ಹಾಗೂ ಉದ್ದಿಮೆಗಳು ಸಾರ್ವಜನಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಯೋಜನೆಯಡಿ ದೇಣಿಗೆ ನೀಡುತ್ತಿವೆ.

ADVERTISEMENT

ಬುಧವಾರ ಈ ಕುರಿತು ಪ್ರತಿಕ್ರಿಯೆ ನೀಡಿರುವ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ‘ಸ್ವಚ್ಛ, ಸುಂದರ ಹಾಗೂ ಸಂಪೂರ್ಣ ಮಂತ್ರಾಲಯ ಘೋಷಣೆಯೊಂದಿಗೆ ಸುಂದರ ಪರಿಸರ ನಿರ್ಮಿಸುವ ಕೆಲಸ ನಡೆಯುತ್ತಿದೆ. ಕೇಂದ್ರ ಸರ್ಕಾರವು ಐಕಾನ್‌ ಎಂದು ಗುರುತಿಸಿರುವುದರಿಂದ ಮಠದ ಜವಾಬ್ದಾರಿ ಹೆಚ್ಚಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.