ADVERTISEMENT

ಸ್ವಯಂ ನಿವೃತ್ತಿ ಕೋರಿ ಐಜಿಪಿ, ಎಡಿಜಿಪಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 19:59 IST
Last Updated 20 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಗೃಹರಕ್ಷಕ ದಳದ ಐಜಿಪಿ ಗೋಪಾಲ ಹೊಸೂರ್‌ ಹಾಗೂ ರಾಜ್ಯ ಮೀಸಲು ಪೊಲೀಸ್‌ ಪಡೆಯ ಎಡಿಜಿಪಿ ಡಾ.ಹರ್ಷವರ್ಧನ ರಾಜು ಅವರು ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಹೊಸೂರ್‌ ಅವರು ಎರಡು ದಿನಗಳ ಹಿಂದೆಯಷ್ಟೇ ಸ್ವಯಂ ನಿವೃತ್ತಿ ಕೋರಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಅರ್ಜಿ ರವಾನಿಸಿದ್ದಾರೆ. ಡಾ.ರಾಜು ಅವರು ಎರಡು ತಿಂಗಳ ಹಿಂದೆ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ವಯಂ ನಿವೃತ್ತಿಗೆ ಇವರಿಬ್ಬರೂ ‘ವೈಯಕ್ತಿಕ ಕಾರಣ’ ನೀಡಿದ್ದಾರೆ. ಇವರ ಕೋರಿಕೆಯನ್ನು 3 ತಿಂಗಳ ಒಳಗೆ ಇತ್ಯರ್ಥಪಡಿಸಬೇಕಾಗು ತ್ತದೆ. ಹೊಸೂರ್‌ ಸೇವಾವಧಿ 2014ರ ಮಾರ್ಚ್‌ವರೆಗೆ ಹಾಗೂ ಡಾ.ರಾಜು ಅವರ ಸೇವಾವಧಿ 2015ರ ಡಿಸೆಂಬರ್‌ವರೆಗೂ ಇದೆ.

‘ವೈಯಕ್ತಿಕ ಕಾರಣಗಳಿಂದಾಗಿ ಸ್ವಯಂ ನಿವೃತ್ತಿ ಪಡೆಯಲು ಬಯಸಿ ದ್ದೇನೆ. ಸರ್ಕಾರದೊಂದಿಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಕೆ.ಜೆ. ಜಾರ್ಜ್‌ ಅವರೊಂದಿಗೆ ಮೊದಲಿನಿಂದಲೂ ಒಳ್ಳೆಯ ಸಂಬಂ ಧವಿದೆ. ಬೇರೆಬೇರೆ ಅರ್ಥಗಳನ್ನು ಕಲ್ಪಿಸುವ ಅಗತ್ಯವಿಲ್ಲ’ ಎಂದು ಹೊಸೂರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಹೊಸೂರ್‌ ಅವರು ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುಪ್ತಚರ  ವಿಭಾಗದ ಮುಖ್ಯಸ್ಥರಾಗಿದ್ದರು. ಕಾಂಗ್ರೆಸ್‌ ಸರ್ಕಾರ ಅವರನ್ನು
ಗೃಹ ರಕ್ಷಕ ದಳಕ್ಕೆ ವರ್ಗಾಯಿಸಿತ್ತು. ಇದರಿಂದ ಹೊಸೂರ್‌ ಅವರು ಬೇಸರಗೊಂಡಿದ್ದರು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.