ADVERTISEMENT

ಸ್ವಾಮೀಜಿ-ಪರಮೇಶ್ವರ್ ಗುಪ್ತ ಮಾತುಕತೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2013, 19:59 IST
Last Updated 1 ಏಪ್ರಿಲ್ 2013, 19:59 IST

ತುಮಕೂರು: ಸಿದ್ದಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ ಸೋಮವಾರ 106ನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಸ್ವಾಮೀಜಿಯಿಂದ ಆಶೀರ್ವಾದ ಪಡೆಯಲು ಬಂದಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹತ್ತು ನಿಮಿಷ ಕಾಲ ರಹಸ್ಯ ಮಾತುಕತೆ ನಡೆಸಿದರು.

ಇದಕ್ಕೂ ಮುನ್ನ ಭೇಟಿ ನೀಡಿದ್ದ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸ್ವಾಮೀಜಿಗೆ ಫಲ ಪುಷ್ಪ ನೀಡಿ ಆಶೀರ್ವಾದ ಪಡೆದು ತೆರಳಿದ್ದರು. ಆದರೆ ಪರಮೇಶ್ವರ್ ಗುಪ್ತವಾಗಿ ಮಾತನಾಡುವ ಬಯಕೆ ವ್ಯಕ್ತಪಡಿಸಿ ಸ್ವಾಮೀಜಿ ಅವರನ್ನು ಖಾಸಗಿ ಕೊಠಡಿಗೆ ಕರೆದೊಯ್ದು ಮಾತನಾಡಿದರು. ಈ ವೇಳೆ ಸ್ವಾಮೀಜಿ ಸಹಾಯಕರನ್ನು ಕೂಡ ಹೊರಗೆ ಕಳುಹಿಸಲಾಗಿತ್ತು.

ಸ್ವಾಮೀಜಿ ಭೇಟಿ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಪರಮೇಶ್ವರ್, ಏ. 5ರೊಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು. ನಾಮಪತ್ರ ಸಲ್ಲಿಸಲು ಏ. 17 ಕಡೆ ದಿನವಾಗಿದ್ದು, ಅಲ್ಲಿವರೆಗೂ ಸಮಯಾವಕಾಶ ಇದೆಯಲ್ಲ ಎಂದರು.

ಮಹಿಳೆಯರು, ಯುವಕರಿಗೆ ಶೇಕಡವಾರು ಎಷ್ಟು ಸೀಟುಗಳನ್ನು ಮೀಸಲಿಡಲಾಗಿದೆ ಎಂಬ ಪ್ರಶ್ನೆಗೆ ಅವರ ಬಳಿ ಮಾಹಿತಿ ಇರಲಿಲ್ಲ. ಅದನ್ನೆಲ್ಲ ಲೆಕ್ಕ ಹಾಕಿಲ್ಲ. ಒಟ್ಟಾರೆ ಯುವಕರಿಗೂ ಆದ್ಯತೆ ನೀಡಲಾಗುವುದು. ಬಹಳ ಕಸರತ್ತು, ಸರ್ಕಸ್ ಮಾಡಿ ಪಟ್ಟಿ ಸಿದ್ಧಪಡಿಸಲಾಗಿದೆ. ಗೆಲ್ಲುವುದನ್ನೇ ಮಾನದಂಡವಾಗಿ ಇಟ್ಟುಕೊಳ್ಳಲಾಗಿದೆ. ಕಾಂಗ್ರೆಸ್ ಸೇರಲಿರುವ ನಾಲ್ವರು ಪಕ್ಷೇತರ ಶಾಸಕರಿಗೆ ಟಿಕೆಟ್ ನೀಡಲು ನಿರ್ಧರಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.