ಹೊಸಪೇಟೆ: ಐತಿಹಾಸಿಕ ಹಂಪಿಯ ಹೇಮಕೂಟದಲ್ಲಿ ಮೂಲ ವಿರೂಪಾಕ್ಷೇಶ್ವರನ ವಿಗ್ರಹವನ್ನು ಸ್ಥಾನ ಪಲ್ಲಟಗೊಳಿಸಿ ನಿಧಿಗಾಗಿ ಶೋಧ ನಡೆಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಭಕ್ತ ಸಮುದಾಯ ತಂಡೋಪತಂಡವಾಗಿ ಅಲ್ಲಿಗೆ ತೆರಳಿ ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾಗಿರುವುದಕ್ಕೆ ಹಂಪಿ ಪ್ರವೇಶದ್ವಾರವನ್ನು ಗುರುವಾರ ಸಂಜೆ ಬಂದ್ ಮಾಡಿ ಹಂಪಿ ಉಳಿಸಿ ಆಂದೋಲನಾ ಸಮಿತಿ ಹಾಗೂ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ವಿರೂಪಾಕ್ಷೇಶ್ವರ ದೇವಾಲಯದ ಬಲ ಭಾಗದಲ್ಲಿರುವ ಹೇಮಕೂಟದಲ್ಲಿ ಮೂಲ ವಿರೂಪಾಕ್ಷೇಶ್ವರ ಎಂದೇ ಕರೆಯಲ್ಪಡುವ ಶಿವಲಿಂಗ ವಿಗ್ರಹ ಇದೆ. ಅತ್ಯಂತ ಪ್ರಸಿದ್ಧ ಹಾಗೂ ಹೆಚ್ಚು ಆರಾಧಿಸುವ ದೇವಾಲಯ ಇದಾಗಿದೆ.ಯಾರೋ ಕೆಲವರು ವಿಗ್ರಹವನ್ನು ಕಿತ್ತು ಗಾರೆಯನ್ನು ತೆಗೆದು ನಿಧಿಗಾಗಿ ಹುಡುಕಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ. ಸದಾ ರಕ್ಷಣಾ ಸಿಬ್ಬಂದಿ ಇರುವ ಈ ಸ್ಥಳದಲ್ಲಿ ಇಂತಹ ಘಟನೆ ನಡೆದಿರುವುದಕ್ಕೆ ಇಲಾಖೆಗಳ ಮೇಲೇ ಸಾರ್ವಜನಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಹಂಪಿ ಉಳಿಸಿ ಆಂದೋಲನಾ ಸಮಿತಿಯ ಅನಿಲ್ ನಾಯ್ಡು, ರಾಜವಂಶಜ ಕೃಷ್ಣದೇವರಾಯ, ಹಿಂದೂಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ಭೇಟಿ: ಹಂಪಿ ಪ್ರಾಧಿಕಾರ ಆಯುಕ್ತ ಮತ್ತು ಹೊಸಪೇಟೆ ಉಪವಿಭಾಗಧಿಕಾರಿ ಕರೀಗೌಡ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ಪರಿಶೀಲಿಸಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.