ಬೆಂಗಳೂರು: ‘ಮಲೇಷ್ಯಾದಿಂದ ನಾಲ್ಕು ಹಡಗುಗಳಲ್ಲಿ ಮರಳು ತರಿಸಲಾಗಿದ್ದು, ಎರಡು ತಿಂಗಳ ಒಳಗಾಗಿ ಗ್ರಾಹಕರಿಗೆ ದೊರೆಯುವಂತೆ ಮಾಡಲಾಗುವುದು’ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ ತಿಳಿಸಿದರು.
‘ಆಂಧ್ರ ಪ್ರದೇಶದ ಕೃಷ್ಣಪಟ್ಟಣ ಬಂದರಿಗೆ ಒಂದು ಹಾಗೂ ಮಂಗಳೂರು ಬಂದರಿಗೆ ಮೂರು ಹಡುಗುಗಳಲ್ಲಿ ಮರಳು ಬಂದಿದೆ. ಇದರ ವಿಲೇವಾರಿಗೆ ಪರವಾನಗಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ರಾಜ್ಯದಲ್ಲಿ 30 ಮಿಲಿಯನ್ ಮೆಟ್ರಿಕ್ ಟನ್ (ಎಂಎಂಟಿ) ಮರಳಿನ ಬೇಡಿಕೆ ಇದ್ದು, ಪ್ರಸ್ತುತ 3.5 ಎಂಎಂಟಿ ನದಿ ಮರಳು ಮತ್ತು 23 ಎಂಎಂಟಿ ಎಂ–ಸ್ಯಾಂಡ್ ಲಭ್ಯವಿದೆ. 3.5 ಎಂಎಂಟಿ ಕೊರತೆ ನೀಗಿಸುವ ಪ್ರಯತ್ನ ನಡೆಯುತ್ತಿದೆ’ ಎಂದರು.
ಅಕ್ರಮ ಮರಳು ಗಣಿಗಾರಿಕೆ, ಸಾಗಣೆ ಹಾಗೂ ಸಂಗ್ರಹಣೆ ವಿಚಾರದಲ್ಲಿ ಕಾಯ್ದೆಗೆ ಕೆಲವೊಂದು ತಿದ್ದುಪಡಿ ತರಲಾಗಿದೆ. ಹಿಂದೆಲ್ಲ ಮರಳು ಸಾಗಣೆ ವಾಹ
ನಗಳನ್ನು ಜಪ್ತಿ ಮಾಡಿದರೆ, ದಂಡ ಕಟ್ಟಿಸಿಕೊಂಡು ಬಿಡಲಾಗುತ್ತಿತ್ತು. ಇದರಿಂದ ಯಾವುದೇ ಭಯವಿಲ್ಲದೆ ಮಾಫಿಯಾ ಮುಂದುವರಿದಿತ್ತು ಎಂದರು.
1,427 ಹುದ್ದೆ ಮಂಜೂರು, ಇರುವುದು 403 ಮಾತ್ರ!
‘ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ 1,427 ಹುದ್ದೆಗಳು ಮಂಜೂರಾಗಿದ್ದು, ಪ್ರಸ್ತುತ 403 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಸಿಬ್ಬಂದಿ ಕೊರತೆ ನೀಗಿಸಲು 137 ಭೂ ವಿಜ್ಞಾನಿಗಳು, 48 ಕಿರಿಯ ಎಂಜಿನಿಯರ್ಗಳು, 63 ಪ್ರಥಮ ದರ್ಜೆ ಸಹಾಯಕರು ಸೇರಿದಂತೆ ಒಟ್ಟು 249 ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲಾಗುವುದು’ ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಗಣಿ ಗುತ್ತಿಗೆ ವಿವರ
378
ಮುಖ್ಯ ಖನಿಜ ಗಣಿ ಗುತ್ತಿಗೆಗಳು
2,846
ಉಪ ಖನಿಜ ಗುತ್ತಿಗೆಗಳು
164
ಎಂ-ಸ್ಯಾಂಡ್ ಘಟಕಗಳು
1,374
ಕಲ್ಲುಪುಡಿ ಘಟಕಗಳು
* 2017-18ನೇ ಸಾಲಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ₹ 2,746 ಕೋಟಿ ರಾಜಧನ ಸಂಗ್ರಹವಾಗಿದ್ದು, ಈ ಸಾಲಿನಲ್ಲಿ ₹ 3,000 ಕೋಟಿ ಸಂಗ್ರಹಿಸುವ ಗುರಿ ಹೊಂದಿದ್ದೇವೆ
– ರಾಜಶೇಖರ ಪಾಟೀಲ, ಗಣಿ ಮತ್ತು ಭೂವಿಜ್ಞಾನ ಸಚಿವ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.