ದಾವಣಗೆರೆ: ಆಭರಣ ಮಾರಾಟ ಮಳಿಗೆಯ ಮಾಲೀಕನನ್ನು ‘ಹನಿ ಟ್ರ್ಯಾಪ್’ಗೆ ಬೀಳಿಸಿ ₹ 5 ಲಕ್ಷ ವಂಚಿಸಿದ್ದ ದಂಪತಿಯನ್ನು ಭಾನುವಾರ ಬಸವನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ವೆಂಕಟೇಶ್ ಹಾಗೂ ರೇಖಾ ಬಂಧಿತರು. ಆರೋಪಿಗಳಿಂದ ₹ 5 ಲಕ್ಷ ವಶಪಡಿಸಿಕೊಳ್ಳಲಾಗಿದೆ.
ಏನಿದು ಪ್ರಕರಣ?:
ಚೌಕಿಪೇಟೆಯಲ್ಲಿರುವ ಆಭರಣ ಮಳಿಗೆ ಮಾಲೀಕ ಭಾವಿಷ್ಗೆ ಎರಡು ವರ್ಷಗಳ ಹಿಂದೆ ರೇಖಾ ಎಂಬುವರ ಪರಿಚಯವಾಗಿತ್ತು. ಈ ಸಂದರ್ಭ ಇಬ್ಬರ ಮೊಬೈಲ್ ಸಂಖ್ಯೆಗಳು ವಿನಿಯಮವಾಗಿದ್ದವು. ಪರಿಚಯ ಸ್ನೇಹಕ್ಕೆ ತಿರುಗಿ, ಸಲುಗೆ ಬೆಳೆದಿತ್ತು. ಬಳಿಕ ಪತಿಯ ಜತೆಗೂಡಿ ಉದ್ಯಮಿಯನ್ನು ‘ಹನಿಟ್ರ್ಯಾಪ್’ಗೆ ಬೀಳಿಸಲಾಗಿದೆ
ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪತಿಯ ಸಾಥ್: ಈಚೆಗೆ ಭಾವಿಷ್ಗೆ ಕರೆ ಮಾಡಿದ್ದ ಮಹಿಳೆ ಮನೆಗೆ ಕರೆಸಿಕೊಂಡು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದರು. ಈ ಸಂದರ್ಭ ಮನೆಯಲ್ಲೇ ಅವಿತುಕೊಂಡಿದ್ದ ಪತಿ ಮೊಬೈಲ್ನಲ್ಲಿ ಚಿತ್ರೀಕರಣ ಮಾಡಿದ್ದರು. ನಂತರ ಉದ್ಯಮಿಗೆ ಕರೆ ಮಾಡಿ ₹ 15 ಲಕ್ಷ ಕೊಡುವಂತೆ ಬೇಡಿಕೆ ಇಟ್ಟಿದ್ದರು. ಒಪ್ಪದಿದ್ದಾಗ ವಿಡಿಯೊ ಬಹಿರಂಗ ಪಡಿಸುವುದಾಗಿ ಬೆದರಿಸಿ ಕೊನೆಗೆ ₹ 5 ಲಕ್ಷ ಪಡೆದಿದ್ದರು ಎಂದು ಪೊಲೀಸರು ಪ್ರಕರಣದ ಮಾಹಿತಿ ನೀಡಿದ್ದಾರೆ.
ಕೆಲ ದಿನಗಳ ಬಳಿಕ ಮತ್ತೆ ₹ 1.50 ಲಕ್ಷಕ್ಕೆ ದಂಪತಿ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಭಾವಿಷ್ ಬಸವನಗರ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ದಂಪತಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ವೀರೇಶ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.