ADVERTISEMENT

ಹಲ್ಲೆ: ಎಸಿಎಫ್ ಸಾವು; ಶವವಿಟ್ಟು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಮೇ 2012, 19:30 IST
Last Updated 9 ಮೇ 2012, 19:30 IST

ಕಾರವಾರ: ವನ್ಯಜೀವಿ ವಿಭಾಗದ ದಾಂಡೇಲಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮದನ ನಾಯಕ ಅವರನ್ನು ಹತ್ಯೆ ಮಾಡಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿ ದಾಂಡೇಲಿಯಲ್ಲಿ ನಾಯಕ ಅವರ ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು.

ಸ್ಥಳೀಯರು, ವಿವಿಧ ಸಂಘ-ಸಂಸ್ಥೆಗಳು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 ಐದು ಗಂಟೆಗೂ ಹೆಚ್ಚುಕಾಲ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಹಲ್ಲೆ ಪ್ರಕರಣ ದಾಖಲಿಸಲು ವಿಳಂಬ ಮಾಡಿದ ಗ್ರಾಮೀಣ ಠಾಣೆಯ ಪಿಎಸ್‌ಐ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಹಾಗೆಯೇ ಪ್ರಕರಣ ದಾಖಲಿಸದಂತೆ ಸ್ಥಳೀಯ ಪೊಲೀಸರ ಮೇಲೆ ಒತ್ತಡ ತರುತ್ತಿದ್ದ ಬಾಗಲಕೋಟೆ ಜಿಲ್ಲೆ ತಿಕೋಟ ಠಾಣೆಯ ಪಿಎಸ್‌ಐ ಎಸ್.ಆರ್.ನಾಯಕ ಅವರನ್ನು ಆರೋಪಿಯನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.
ಡಿಎಸ್‌ಪಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರೂ ಫಲ ನೀಡಲಿಲ್ಲ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಸ್ಥಳಕ್ಕೆ ಬಂದು ಬೇಡಿಕೆ ಈಡೇರಿಸುವ ಕುರಿತು ಭರವಸೆ ನೀಡುವವರೆಗೆ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಟಿ.ಬಾಲಕೃಷ್ಣ ಸ್ಥಳಕ್ಕೆ ಹೋಗಿ  ಭರವಸೆ ನೀಡಿದ ನಂತರ ಸ್ಥಳೀಯರು ಪ್ರತಿಭಟನೆ ಹಿಂದಕ್ಕೆ ಪಡೆದರು.

ನಾಲ್ವರ ಬಂಧನ: ಘಟನೆಗೆ ಸಂಬಂಧಿಸಿದಂತೆ ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಆರು ಜನರ ಮೇಲೆ ದೂರು ದಾಖಲಾಗಿದ್ದು ಆನಂದ ರೂಪಸಿಂಗ್ ನಾಯಕ, ಸುರೇಶ ಸಂಕ್ರಪ್ಪ ನಾಯಕ, ಪ್ರಶಾಂತ ರಾಮಾ ಲಮಾಣಿ, ಅರವಿಂದ ಚೌವಾಣ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಇಬ್ಬರು ತಲೆಮರೆಸಿಕೊಂಡಿದ್ದಾರೆ.

ಕುಟೀರಕ್ಕೆ ಬೆಂಕಿ:  ಸೋಮವಾರ ಘಟನೆ ನಡೆದ ಸ್ಥಳದಲ್ಲಿದ್ದ ಶಿವರಾಮ ಪಾಟೀಲ ಎನ್ನುವವರಿಗೆ ಸೇರಿದ ಕುಟೀರಕ್ಕೆ ಕಿಡಿಗೇಡಿಗಳು ಬುಧವಾರ ಬೆಂಕಿ ಹಚ್ಚಿದ ಘಟನೆ ನಡೆದಿದೆ. ಕುಟೀರ ಸಂಪೂರ್ಣ ಸುಟ್ಟು ಹೋಗಿದೆ.

ಘಟನೆ ವಿವರ: ದಾಂಡೇಲಿ ಸಮೀಪದ ಹಾಲಮಡ್ಡಿಯ ದಾಂಡೇಲಪ್ಪ ದೇವಸ್ಥಾನದ ಸಮೀಪ ಮೊಸಳೆ     ಪಾರ್ಕ್‌ಗೆ ಎಸಿಎಫ್ ಮದನ ನಾಯಕ ಅವರು ತಮ್ಮ ಕುಟುಂಬದೊಂದಿಗೆ ಸೋಮವಾರ ತೆರಳಿದ್ದರು.
 
ದಾಂಡೇಲಿ ನಗರಸಭೆ ಸಿಬ್ಬಂದಿ ಅರವಿಂದ ಚೌವಾಣ ಅವರ ಸಂಬಂಧಿಕರು, ಸ್ನೇಹಿತರು ಅಲ್ಲಿಗೆ ಸಮೀಪದ ತೋಟವೊಂದರಲ್ಲಿ ಇದ್ದರು. ಅವರು ಮಾಂಸದ ತುಂಡುಗಳನ್ನು ಮೊಸಳೆಗಳಿಗೆ ಎಸೆಯುತ್ತಿದ್ದುದನ್ನು ನೋಡಿದ ಎಸಿಎಫ್ ನಾಯಕ ಅವರು ಮೊಸಳೆಗಳಿಗೆ ಮಾಂಸ ಎಸೆಯದಂತೆ ಮನವಿ ಮಾಡಿಕೊಂಡಿದ್ದಾರೆ.

  


ಸಿಐಡಿ ತನಿಖೆಗೆ ಆದೇಶ
ಪ್ರಜಾವಾಣಿ ವಾರ್ತೆ
ಬೆಂಗಳೂರು:
ಸಹಾಯಕ ಅರಣ್ಯ ಅಧಿಕಾರಿ (ಎಸಿಎಫ್) ಮದನ ನಾಯಕ ಅವರ ಸಾವಿನ ಪ್ರಕರಣ ಕುರಿತು ಸಿಐಡಿ ತನಿಖೆಗೆ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಆದೇಶಿಸಿದ್ದಾರೆ.
ಈ ವಿಷಯವನ್ನು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ `ಪ್ರಜಾವಾಣಿ~ಗೆ ತಿಳಿಸಿದರು.
 ಈ ಪ್ರಕರಣ ಕುರಿತು ಅಧಿಕಾರಿಗಳ ಜತೆ ಮೊದಲು ಮಾತುಕತೆ ನಡೆಸಿದ ಅರಣ್ಯ ಸಚಿವರು ನಂತರ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಸಿಐಡಿ ತನಿಖೆ ಮಾಡಿಸುವ ಅಗತ್ಯವನ್ನು ಮನವರಿಕೆ ಮಾಡಿಕೊ್ಟೂರು.
 ಬಳಿಕ ಮು್ಯೂಮಂ್ರೂಿ ತನಿಖೆಗೆ ಆದೇಶಿಸಿ್ದೂಾರೆ.

ADVERTISEMENT



ನಾಯಕ ಅವರ ಮಾತಿಗೆ ಕಿವಿಗೊಡದೆ ಕುಡಿದ ಅಮಲಿನಲ್ಲಿದ್ದ ಅರವಿಂದ ಅವರ ಸ್ನೇಹಿತರು `ನಮಗೆ ಹೇಳಲು ನೀವ್ಯಾರು~ ಎಂದು ನಾಯಕ ಅವರನ್ನೇ ಗದರಿಸಿ ಹಲ್ಲೆ ನಡೆಸಿದ್ದಾರೆ. ಅಲ್ಲಿಯೇ ಇದ್ದ ನಾಯಕ ಅವರ ಪತ್ನಿ ಸುಮತಿ, ಪುತ್ರ ಶಿಶಿರ್ ಮತ್ತು ಪುತ್ರಿ ಮೇಘನಾ ಅವರ ಮೇಲೂ ಹಲ್ಲೆ ನಡೆಸಲಾಯಿತು. ಮದನ ನಾಯಕ ಅವರು ಗಂಭೀರವಾಗಿ ಗಾಯಗೊಂಡು ಧಾರವಾಡದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಮಂಗಳವಾರ ರಾತ್ರಿ ಸಾವನ್ನಪ್ಪಿದ್ದರು.

ಅಂತ್ಯಕ್ರಿಯೆ:  ಮದನ ನಾಯಕ ಅವರ ಅಂತ್ಯಕ್ರಿಯೆ ಅಂಕೋಲಾ ತಾಲ್ಲೂಕಿನ ಬೇಲೆಕೇರಿಯಲ್ಲಿ ಬುಧವಾರ ನಡೆಯಿತು. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಪೊಲೀಸ್ ಮತ್ತು ಅರಣ್ಯ ಇಲಾಖೆ ವತಿಯಿಂದ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.