ಹಾವೇರಿ: ಲಿಂಗಾಯತ ಉಪ ಜಾತಿಯ ಯುವಕನನ್ನು ಪ್ರೀತಿಸಿದ ತಂಗಿಯನ್ನು ಅಣ್ಣನೇ ಐದು ತಿಂಗಳ ಕಾಲ ಗೃಹಬಂಧನದಲ್ಲಿಟ್ಟು, ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆ ಜಿಲ್ಲೆಯ ಸವಣೂರು ತಾಲ್ಲೂಕಿನ ಕಲಕೋಟಿ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಸವಣೂರು ಠಾಣೆ ಪೊಲೀಸರ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿಗಳ ಪ್ರಯತ್ನದ ಫಲವಾಗಿ ಯುವತಿ ಬಂಧಮುಕ್ತಳಾಗಿ ಈಗ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾಳೆ.
ಆಕೆಯ ಸಹೋದರನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆದರೆ, ಅಣ್ಣನ ವಿರುದ್ಧ ತಾನು ನೀಡಿದ ದೂರನ್ನು ದಾಖಲಿಸಿಕೊಳ್ಳಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಘಟನೆ ವಿವರ: ಹತ್ತಿಮತ್ತೂರ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಈ ಯುವತಿ, ಅಲ್ಲಿಯೇ ಕೆಲಸ ಮಾಡುತ್ತಿದ್ದ ಕುಂದಗೋಳ ತಾಲ್ಲೂಕಿನ ಸಂಶಿ ಗ್ರಾಮದ ಯುವಕನನ್ನು ಪ್ರೀತಿಸಿ ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದರು.
ಯುವಕ ಲಿಂಗಾಯತ ಸಾದರ ಸಮುದಾಯಕ್ಕೆ ಸೇರಿದ್ದು, ಯುವತಿ ಕುಡುವಕ್ಕಲಿಗ ಸಮಾಜವರು. ಈ ಮದುವೆಗೆ ಅಣ್ಣ ವಿರೋಧಿಸಿ ತಂಗಿಯನ್ನು ಮನೆಯಲ್ಲಿ ಕೂಡಿ ಹಾಕಿದ್ದಾನೆ. ಆಕೆಗೆ ಒಂದು ಹೊತ್ತು ಊಟ ನೀಡುತ್ತಿದ್ದ ಆತ, ಸತತ ಎರಡು ತಿಂಗಳು ಕಾಲ ರಾತ್ರಿ ಮೂರ್ನಾಲ್ಕು ನಿದ್ದೆ ಮಾತ್ರೆ ನೀಡಿದ್ದಾನೆ. ಮಲಮೂತ್ರ ಮಾಡಲು ಮನೆಯ ಹಿತ್ತಲಿನಲ್ಲಿ ರಾತ್ರಿ ಮಾತ್ರ ಅವಕಾಶ ನೀಡಿದ್ದಾನೆ.
ಪರಾರಿಗೆ ಯತ್ನ: ಜನವರಿ 5 ರಂದು ಮನೆಯಿಂದ ತಪ್ಪಿಸಿಕೊಂಡು ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದರು. ಆಕೆಯನ್ನು ಉಪಾಯವಾಗಿ ಮನೆಗೆ ಕರೆತಂದ ಅಣ್ಣ ಮತ್ತೆ ಆಕೆಯನ್ನು ಥಳಿಸಿದ್ದಾನೆ. ಈ ಸಂದರ್ಭದಲ್ಲಿ ಆಕೆಯ ಎಡಗೈ ಮೂಳೆ ಮುರಿದಿದೆ. ಆಕೆಯನ್ನು ಆಸ್ಪತ್ರೆಗೂ ಕರೆದುಕೊಂಡು ಹೋಗದೇ ಮತ್ತೆ ಕೋಣೆಯಲ್ಲಿ ಕೂಡಿ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಇದಾದ ಎರಡು ತಿಂಗಳ ನಂತರ ಯಾವುದೋ ಮೂಲದಿಂದ ಬುಧವಾರ ಪೊಲೀಸರಿಗೆ ವಿಷಯ ಗೊತ್ತಾಗಿದೆ. ಬುಧವಾರ ಯುವತಿಯನ್ನು ಗೃಹಬಂಧನದಿಂದ ಬಿಡುಗಡೆ ಮಾಡಿದ್ದಾರೆ. ‘ನನ್ನ ಸಹೋದರನ ಮನೆಗೆ ಹೋಗಲು ನನಗೆ ಇಷ್ಟವಿಲ್ಲ. ನಾನು ಪ್ರೀತಿಸಿದವನ ಜತೆ ಮದುವೆ ಮಾಡಿಕೊಳ್ಳಬೇಕು ಎಂಬ ಆಸೆಯಿದೆ’ ಎಂದು ಯುವತಿ ಪೊಲೀಸರಿಗೆ ಹೇಳಿದ್ದಾಳೆ.
ಹುಬ್ಬಳ್ಳಿಗೆ ಕಳುಹಿಸಲು ನಿರ್ಧಾರ
ಹಾವೇರಿ: ‘ಗೃಹಬಂಧನದಿಂದ ಮಾನಸಿಕವಾಗಿ ನೊಂದಿರುವ ಹಾಗೂ ಅಣ್ಣನ ಹೊಡೆತದಿಂದ ಕೈ ಮೂಳೆ ಮುರಿದುಕೊಂಡಿರುವ ಯುವತಿಯನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ಗೆ ಕಳುಹಿಸಲಾಗುತ್ತದೆ. ಆಕೆ ಸಂಪೂರ್ಣ ಗುಣಮುಖಳಾದ ನಂತರ ಹುಬ್ಬಳ್ಳಿಯಲ್ಲಿರುವ ಮಹಿಳಾ ನಿಲಯಕ್ಕೆ ಕಳುಹಿಸಲಾಗುವುದು. ಅಲ್ಲಿ ನಮ್ಮ ಅಧಿಕಾರಿಗಳ ಆರೈಕೆಯಲ್ಲಿ ಕೆಲವು ದಿನ ಇರಲಿದ್ದಾಳೆ’ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಎನ್.ಮಾಳಗೇರ ತಿಳಿಸಿದ್ದಾರೆ.
ಸಮಾಲೋಚನೆ: ‘ಯುವತಿ ಪ್ರೀತಿಸಿದ ಯುವಕನ ಜೊತೆಗೆ ಮದುವೆ ಮಾಡಿಸುವ ಕುರಿತು ಯುವಕನ ತಂದೆ, ತಾಯಿ ಹಾಗೂ ಯುವತಿ ತಂದೆ, ತಾಯಿ ಹಾಗೂ ಬಂಧುಗಳ ಜತೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಜಿಲ್ಲಾ ಮಹಿಳಾ ಸಾಂತ್ವನ ಕೇಂದ್ರದ ಮುಖ್ಯಸ್ಥೆ ಪರಿಮಳಾ ಜೈನ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.