ಹುಬ್ಬಳ್ಳಿ: ‘ಹಿಂದೂಗಳ ಮೇಲೆ ದೌರ್ಜನ್ಯ ನಡೆಸುವ ಮುಸ್ಲಿಂ ಕಿಡಿಗೇಡಿಗಳಿಗೆ ರಾಜ್ಯ ಸರ್ಕಾರವೇ ಕುಮ್ಮಕ್ಕು ನೀಡುತ್ತಿದೆ. ಘಟನೆ ನಡೆದ ತಕ್ಷಣ ಪೊಲೀಸರು ಕಠಿಣ ಕ್ರಮ ತೆಗೆದುಕೊಂಡಿದ್ದರೆ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ನಡೆಯುತ್ತಿರಲಿಲ್ಲ’ ಎಂದು ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಈಚೆಗೆ ನಡೆದ ಘರ್ಷಣೆಯಲ್ಲಿ ಗಾಯಗೊಂಡು ಇಲ್ಲಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ ಕಳಸೂರ ಅವರ ಆರೋಗ್ಯ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಇದನ್ನೇ ಮಾಡುತ್ತಾ ಬಂದಿದೆ. ಮುಸ್ಲಿಂ ಯುವಕರನ್ನು ಹಿಂಸೆಗೆ ಪ್ರಚೋದಿಸುತ್ತಿದೆ. ಸರ್ಕಾರದಲ್ಲಿರುವ ಕೆಲವರುಉದ್ದೇಶಪೂರ್ವಕವಾಗಿ ಹಿಂದೂ– ಮುಸ್ಲಿಂ ಸಮುದಾಯಗಳ ಮಧ್ಯದ ಅಂತರವನ್ನು ಹೆಚ್ಚಿಸುತ್ತಿದ್ದಾರೆ’ ಎಂದರು.
‘ಸಚಿವ ರಮಾನಾಥ ರೈ ಅವರು ಯಾವ ಸವಾಲು ಬೇಕಿದ್ದರೂ ಹಾಕಲಿ. ನಾನು ಅವರ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸುವ ಯೋಚನೆ ಇಲ್ಲ. ನಾನು ಆ ರಾಜಕೀಯದಿಂದ ದೂರ ಇದ್ದೇನೆ. ಯಾರು ಉತ್ತಮರು ಇದ್ದಾರೋ ಅವರಿಗೆ ಬೆಂಬಲಿಸುವಂತೆ ಯುವ ಮತದಾರರಿಗೆ ಹೇಳುವ ರಾಜಕೀಯ ಮಾಡುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.