ADVERTISEMENT

ಹಿರಿಯಡಕ ಪಿಎಸ್‌ಐ ಸೇರಿ 6 ಮಂದಿಯ ಬಂಧನ

ದನದ ವ್ಯಾಪಾರಿ ಹುಸೈನಬ್ಬ ಅನುಮಾನಾಸ್ಪದ ಸಾವಿನ ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಜೂನ್ 2018, 19:30 IST
Last Updated 3 ಜೂನ್ 2018, 19:30 IST

ಉಡುಪಿ: ಪೆರ್ಡೂರಿನ ಶೀನಬೆಟ್ಟುವಿನ ದನದ ವ್ಯಾಪಾರಿ ಹುಸೇನಬ್ಬ ಸಾವಿನ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಹಿರಿಯಡಕ ಠಾಣೆ ಪಿಎಸ್‌ಐ ಡಿ.ಎನ್‌.ಕುಮಾರ್ ಸೇರಿದಂತೆ 6 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಹಿರಿಯಡಕ ಠಾಣೆ ಹೆಡ್‌ಕಾನ್‌ಸ್ಟೆಬಲ್‌ ಮೋಹನ್‌ ಕೊತ್ವಾಲ್‌, ಜೀಪು ಚಾಲಕ ಗೋಪಾಲ್ ಹಾಗೂ ಆರೋಪಿಗಳಾದ ಚೇತನ್‌, ಶೈಲೇಶ್‌ ಶೆಟ್ಟಿ, ಗಣೇಶ ನಾಯ್ಕ ಬಂಧಿತರು. ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಇದೀಗ 10ಕ್ಕೆ ಏರಿದೆ.

ಹಿನ್ನೆಲೆ: ಮೇ 29 ರಂದು ಮಂಗಳೂರಿನ ಜೋಕಟ್ಟೆ ನಿವಾಸಿ ಹುಸೇನಬ್ಬ ಅವರು ಇಬ್ಬರು ಪರಿಚಿತರ ಜತೆಗೆ ಸ್ಕಾರ್ಪಿಯೊ ವಾಹನದಲ್ಲಿ ದನ ತುಂಬಿಕೊಂಡು ಪೆರ್ಡೂರಿನಿಂದ  ಶೀನಬೆಟ್ಟು ಮಾರ್ಗವಾಗಿ ಬರುತ್ತಿದ್ದರು. ಈ ಮಾಹಿತಿ ತಿಳಿದ ಬಜರಂಗದಳದ ಕಾರ್ಯಕರ್ತ ಸುರೇಶ್‌ ಹಾಗೂ ಇತರ ಆರೋಪಿಗಳು ಹಿರಿಯಡಕ ಠಾಣೆ ಪೊಲೀಸರ ಎದುರಿನಲ್ಲಿಯೇ ವಾಹನ ತಡೆದಿದ್ದರು. ಇಬ್ಬರು ಪರಾರಿಯಾದರೆ, ಹುಸೇನಬ್ಬ ಸಿಕ್ಕಿಬಿದ್ದಿದ್ದರು. ಪೊಲೀಸರ ಎದುರೇ ಹುಸೇನಬ್ಬ ಅವರ ಮೇಲೆ ಹಲ್ಲೆ ನಡೆಸಿ ದನಗಳನ್ನು ಸಾಗಿಸುತ್ತಿದ್ದ ವಾಹನವನ್ನು ಜಖಂಗೊಳಿಸಿದ್ದರು. ಬಳಿಕ ಪೊಲೀಸರು ಹುಸೇನಬ್ಬ ಅವರನ್ನು ಠಾಣೆಗೆ ಕರೆದೊಯ್ಯುವಾಗ ಅವರು ಸಾವನ್ನಪ್ಪಿದ್ದರು.

ADVERTISEMENT

ನಂತರ ಪೊಲೀಸರು ಆರೋಪಿಗಳ ಸಹಾಯದಿಂದ ಶವವನ್ನು 1 ಕಿ.ಮೀ ದೂರದಲ್ಲಿ ಇಟ್ಟು ಬಂದು ಹುಸೇನಬ್ಬ ಹೃದಯಾಘಾತದಿಂದ ಮೃತಪಟ್ಟಿದ್ದು, ಅಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ಈ ಎಲ್ಲ ಅಂಶಗಳನ್ನು ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಎಸ್‌ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್‌ 1ರಂದು ಬಳ್ಳಾರಿಯಲ್ಲಿ ಪ್ರಮುಖ ಆರೋಪಿಗಳಾದ ಬಜರಂಗ ದಳದ ಕಾರ್ಯಕರ್ತ ಸುರೇಶ್‌ ಮೆಂಡನ್‌ ಹಾಗೂ ಪ್ರಸಾದ್ ಕೊಂಡಾಡಿ ಎಂಬವರನ್ನು ಬಂಧಿಸಲಾಗಿತ್ತು. ಜೂನ್‌ 2 ರಂದು ಉಮೇಶ್‌ ಶೆಟ್ಟಿ, ರತನ್‌ ಎಂಬವರನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಪೊಲೀಸರ ಕೈವಾಡ ಇರುವುದು ತಿಳಿದು ಬಂದಿರುವುದರಿಂದ ಪಿಎಸ್‌ಐ ಡಿ.ಎನ್‌.ಕುಮಾರ್, ಸಿಬ್ಬಂದಿ ಗೋಪಾಲ್‌, ಮೋಹನ್‌ ಕೊತ್ವಾಲ್‌ ಅವರನ್ನೂ ಬಂಧಿಸಲಾಗಿದೆ. ಉಳಿದ ಮೂವರು ಆರೋಪಿಗಳನ್ನು ಭಾನುವಾರ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.