ADVERTISEMENT

ಹುಬ್ಬಳ್ಳಿ: ಮಳೆಗಾಲದಲ್ಲೂ ನೀರಿಗೆ ಬರ!

15–20 ದಿನಗಳಿಗೊಮ್ಮೆ ಮಾತ್ರ ಟ್ಯಾಂಕರ್ ಪೂರೈಕೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2016, 20:06 IST
Last Updated 16 ಆಗಸ್ಟ್ 2016, 20:06 IST
ಹುಬ್ಬಳ್ಳಿಯ ಬಸವ ಕಾಲೊನಿಯಲ್ಲಿ ಮಂಗಳವಾರ ಟ್ಯಾಂಕರ್ ಬಂದಾಗ ನೀರು ಹಿಡಿದುಕೊಳ್ಳಲು ಮುಗಿ ಬಿದ್ದ ಜನರು
ಹುಬ್ಬಳ್ಳಿಯ ಬಸವ ಕಾಲೊನಿಯಲ್ಲಿ ಮಂಗಳವಾರ ಟ್ಯಾಂಕರ್ ಬಂದಾಗ ನೀರು ಹಿಡಿದುಕೊಳ್ಳಲು ಮುಗಿ ಬಿದ್ದ ಜನರು   

ಹುಬ್ಬಳ್ಳಿ: ಜಿಲ್ಲೆಯಾದ್ಯಂತ ಈ ವರ್ಷ ವ್ಯಾಪಕ ಮಳೆಯಾಗಿದ್ದು ಎಲ್ಲೆಡೆ  ಹೊಲಗಳಲ್ಲಿ ಹಸಿರು ನಳನಳಸುತ್ತಿದೆ. ಆದರೆ ನಗರಪ್ರದೇಶದಲ್ಲಿ ಮಾತ್ರ ಕುಡಿಯುವ ನೀರಿನ ಬವಣೆ ನೀಗಿಲ್ಲ. ನಗರದ ಬೈರಿದೇವರಕೊಪ್ಪದ ಎಪಿಎಂಸಿ ಆವರಣ ಹಮಾಲಿಗಳು ವಾಸಿಸುವ ಬಸವ ಕಾಲೊನಿಯಲ್ಲಿ ಈಗಲೂ ನೀರಿಗೆ ಪರದಾಟ ತಪ್ಪಿಲ್ಲ.

‘ಇಲ್ಲಿ ಕೊಳವೆಬಾವಿ ಇದೆ, ದೊಡ್ಡ ನೀರನ ಟ್ಯಾಂಕ್‌ ಕೂಡ ಇದೆ. ಶುದ್ಧ ಕುಡಿಯುವ ನೀರಿನ ಘಟಕವೂ ಇದೆ. ಆದರೆ ಟ್ಯಾಂಕ್ ಕೆಟ್ಟು ನಿಂತಿದೆ. ಆದ್ದರಿಂದ ನೀರು ಶೇಖರಿಸಲು ಆಗುತ್ತಿಲ್ಲ. ಶುದ್ಧ ನೀರಿನ ಘಟಕ ಕಾರ್ಯ ನಿರ್ವಹಿಸುವುದಿಲ್ಲ. ಬೋರ್‌ವೆಲ್‌ ಚಾಲೂ ಮಾಡಿದಾಗ ನೇರವಾಗಿ ನೀರು ಹಿಡಿದುಕೊಂಡು ತುಂಬಿಸಿಡಬೇಕು. ಅದಕ್ಕೆ ಆಗಾಗ ವಿದ್ಯುತ್‌ ವ್ಯತ್ಯಯವೂ ಅಡ್ಡಿಯಾಗುತ್ತದೆ’ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

‘ಜಲಮಂಡಳಿಯವರು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡು ತ್ತಾರೆ. ಆದರೆ 15–20 ದಿನಗಳಿಗೊಮ್ಮೆ ಮಾತ್ರ ಟ್ಯಾಂಕರ್ ಬರುತ್ತದೆ. ಅಷ್ಟು ದಿನ ನೀರು ತುಂಬಿ ಇಟ್ಟುಕೊಳ್ಳುವುದಾದರೂ ಹೇಗೆ’ ಎಂದು ಕೇಳುತ್ತಾರೆ ತುಳಸಮ್ಮ ಚಿಕ್ಕತುಂಬಳ.

‘ಮನೆ ಮನೆಗೆ ನಲ್ಲಿ ಅಳವಡಿಸುವ ಯೋಜನೆ ಆರಂಭಗೊಂಡಿದೆ. ಆದರೆ ಅದು ಮಂದಗತಿಯಲ್ಲಿ ಸಾಗಿದೆ. ಅದು ಪೂರ್ಣಗೊಂಡರೂ ಕೇವಲ ಬೋರ್‌ವೆಲ್ ನೀರು ಮಾತ್ರ ಬರಲು ಸಾಧ್ಯ. ಆದ್ದರಿಂದ ಶಾಸಕರ ಅನುದಾನ ದಲ್ಲಿ ಹೊಸದಾಗಿ ಸ್ಥಾಪನೆಯಾಗಲಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ಯಾವಾಗ ನೀರು ಸಿಗುವುದೋ ಎಂದು ಎದುರು ನೋಡುತ್ತಿದ್ದೇವೆ’ ಎನ್ನುತ್ತಾರೆ ಕಾಲೊನಿಯ ನಾಗರಿಕರ ಸಮಿತಿ ಅಧ್ಯಕ್ಷ ದುರಗಪ್ಪ ಚಿಕ್ಕತುಂಬಳ.

ಈ ಕುರಿತು ಜಲಮಂಡಳಿ ಸಹಾ ಯಕ ಕಾರ್ಯನಿರ್ವಾಹಕ ಎಂಜಿನಿ ಯರ್‌ ಎಸ್.ಕಾರ್ಯಪ್ಪ ಅವರನ್ನು ಸಂಪ ರ್ಕಿಸಿದಾಗ ‘ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಬಂದಿಲ್ಲ. ಪರಿಶೀಲಿಸ ಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.