ಕೊಪ್ಪಳ: ಈ ಬಾರಿಯ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ರಾಜ್ಯದ ವಿವಿಧ ಕ್ಷೇತ್ರಗಳಿಗೆ ತೆರಳಲು ರಾಜಕೀಯ ಮುಖಂಡರು, `ಸ್ಟಾರ್ ಪ್ರಚಾರಕರು' ಹೆಲಿಕಾಪ್ಟರ್ ಬಳಸಲು ನಿರ್ಧರಿಸಿದ್ದರೆ ಹಲವಾರು ಷರತ್ತುಗಳ ಜೊತೆಗೆ ಸಮಗ್ರ ತಪಾಸಣೆಗೆ ಒಳಗಾಗುವುದು ಕಡ್ಡಾಯ.
ತಪಾಸಣೆಯಿಂದ `ವಿನಾಯಿತಿ ನೀಡಲಾದ ವರ್ಗ'ಕ್ಕೆ ಸೇರುವ ನಾಯಕರನ್ನು ಹೊರತುಪಡಿಸಿ ಉಳಿದ ಎಲ್ಲ ಮುಖಂಡರು, ಅವರೊಂದಿಗೆ ಹೆಲಿಕಾಪ್ಟರ್ನಲ್ಲಿ ಪ್ರಚಾರಕ್ಕೆ ತೆರಳುವವರನ್ನು ಸಹ ತಪಾಸಣೆಗೆ ಒಳಪಡಿಸುವಂತೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಹೆಲಿಕಾಪ್ಟರ್ ಇಳಿಸಲು ಬಳಸುವ ಜಾಗೆಗೆ ಸಂಬಂಧಪಟ್ಟಂತೆ ಜಿಲ್ಲಾಡಳಿತಕ್ಕೆ ಸಮಗ್ರ ಮಾಹಿತಿ ನೀಡಿ ಅನುಮತಿ ಪಡೆಯುವುದು ಕಡ್ಡಾಯ. ಈಗಾಗಲೇ ಅಸ್ತಿತ್ವದಲ್ಲಿರುವ ಹೆಲಿಪ್ಯಾಡ್ ಬಳಕೆ ಮಾಡುವಂತಿದ್ದರೆ ಸಮಸ್ಯೆ ಇಲ್ಲ. ಒಂದು ವೇಳೆ ಖಾಸಗಿ ಒಡೆತನದ ಜಮೀನಿನಲ್ಲಿ ಹೆಲಿಪ್ಯಾಡ್ ನಿರ್ಮಿಸಿ, ಹೆಲಿಕಾಪ್ಟರ್ ಇಳಿಸುವ ವ್ಯವಸ್ಥೆ ಮಾಡುತ್ತಿದ್ದರೆ, ಆ ಜಮೀನಿನ ಮಾಲಿಕನಿಂದ ಒಪ್ಪಿಗೆ ಪತ್ರ ಸಲ್ಲಿಸುವುದು ಅಗತ್ಯ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ತಿಳಿಸಿದ್ದಾರೆ.
ತಪಾಸಣೆ: ಇನ್ನು, ಹೆಲಿಕಾಪ್ಟರ್ನಿಂದ ಇಳಿದ ತಕ್ಷಣ ನಾಯಕರು ಪ್ರಚಾರ ಕಾರ್ಯಕ್ಕೆ ತೆರಳುವಂತಿಲ್ಲ. ತಪಾಸಣೆಯ ಉದ್ದೇಶಕ್ಕಾಗಿಯೇ ನಿಯೋಜಿತ ಅರೆ ಸೇನಾ ಪಡೆ ಸಿಬ್ಬಂದಿ ಹೆಲಿಕಾಪ್ಟರ್ ಮೂಲಕ ಆಗಮಿಸುವವರನ್ನು ತಪಾಸಣೆ ಮಾಡುತ್ತದೆ.
ಜೊತೆಗೆ, ನಾಯಕರು ತಮ್ಮಂದಿಗೆ ತರುವ ಬ್ಯಾಗ್ಗಳನ್ನು ಹಾಗೂ ಹೆಲಿಕಾಪ್ಟರನ್ನು ಸಹ ಅರೆಸೇನಾ ಪಡೆ ಸಿಬ್ಬಂದಿ ಪರಿಶೀಲಿಸುವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.