ADVERTISEMENT

ಹೇಳಿಕೆ ನೀಡಲು ವಿದ್ವತ್‌ಗೆ ಬಾಯಿ ನೋವು ಅಡ್ಡಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2018, 19:30 IST
Last Updated 26 ಫೆಬ್ರುವರಿ 2018, 19:30 IST
ಹೇಳಿಕೆ ನೀಡಲು ವಿದ್ವತ್‌ಗೆ ಬಾಯಿ ನೋವು ಅಡ್ಡಿ
ಹೇಳಿಕೆ ನೀಡಲು ವಿದ್ವತ್‌ಗೆ ಬಾಯಿ ನೋವು ಅಡ್ಡಿ   

ಬೆಂಗಳೂರು: ವಿದ್ವತ್‌ ಚಿಕಿತ್ಸೆ ಪಡೆಯುತ್ತಿರುವ ಮಲ್ಯ ಆಸ್ಪತ್ರೆಗೆ ಸಿಸಿಬಿ ಪೊಲೀಸರು ಸೋಮವಾರ ಭೇಟಿ ನೀಡಿದರು.

ಫೆ. 17ರಂದು ರಾತ್ರಿ ನಡೆದಿದ್ದ ಘಟನೆಯಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ವಿದ್ವತ್‌ಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಿ ಭಾನುವಾರವಷ್ಟೇ ವಿಶೇಷ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಈ ಮಾಹಿತಿ ತಿಳಿದ ಸಿಸಿಬಿ ಇನ್‌ಸ್ಪೆಕ್ಟರ್‌ ಅಶ್ವತ್ಥ್ ಗೌಡ ನೇತೃತ್ವದ ತಂಡವು ಗಾಯಾಳುವಿನ ಹೇಳಿಕೆ ಪಡೆಯುವುದಕ್ಕಾಗಿ ಬೆಳಿಗ್ಗೆ 11.30ಕ್ಕೆ ಆಸ್ಪತ್ರೆಗೆ ಹೋಗಿತ್ತು.

ನೇರವಾಗಿ ವಿದ್ವತ್‌ ಬಳಿ ಹೋಗಿದ್ದ ಇನ್‌ಸ್ಪೆಕ್ಟರ್‌ ಅವರು, ‘ಪ್ರಕರಣವು ಗಂಭೀರವಾಗಿದೆ. ನೀವು (ವಿದ್ವತ್‌) ಹೇಳಿಕೆ ಕೊಟ್ಟರೆ ತನಿಖೆಗೆ ಸಹಾಯವಾಗಲಿದೆ. ಜತೆಗೆ ಆರೋಪಿಗಳ ಜಾಮೀನಿಗೆ ಆಕ್ಷೇಪಣೆಯನ್ನಾಗಿ ಸಲ್ಲಿಸಲು ನಿಮ್ಮ ಹೇಳಿಕೆ ಮಹತ್ವದ್ದಾಗಿದೆ’ ಎಂದು ಹೇಳಿದರು.

ADVERTISEMENT

ಪೊಲೀಸರನ್ನು ಕಂಡು ಬೆಡ್‌ನಿಂದ ಸ್ವಲ್ಪ ಮೇಲೆದಿದ್ದ ವಿದ್ವತ್‌ ಏನು ಹೇಳಲು ಪ್ರಯತ್ನಿಸಿದರು. ಆದರೆ, ಅವರ ತುಟಿ ಹಾಗೂ ಬಾಯಿ ನೋವು ಇದ್ದಿದ್ದರಿಂದ ಅದು ಸಾಧ್ಯವಾಗಲಿಲ್ಲ. ಬಳಿಕ ಕೈ ಸನ್ನೆ ಮೂಲಕವೇ ‘ಆಗುವುದಿಲ್ಲ’ ಎಂದು ಹೇಳಿದರು. ತೊದಲುತ್ತಲೇ, ‘ಸ್ವಲ್ಪ ಸಮಯ ಕೊಡಿ’ ಎಂದು ಪೊಲೀಸರನ್ನು ಕೇಳಿದರು.

ವಾರ್ಡ್‌ನಲ್ಲಿದ್ದ ಸಂಬಂಧಿ, ‘ಆತ ನಮ್ಮೊಂದಿಗೂ ಮಾತನಾಡಲು ಕಷ್ಟಪಡುತ್ತಿದ್ದಾನೆ. ಸ್ವಲ್ಪ ದಿನ ಬಿಟ್ಟು ಹೇಳಿಕೆ ಪಡೆಯಿರಿ’ ಎಂದರು. ಬಳಿಕ ವೈದ್ಯರ ಬಳಿ ಹೋದ ಪೊಲೀಸರು, ಆರೋಗ್ಯ ಸ್ಥಿತಿ ಬಗ್ಗೆ ತಿಳಿದುಕೊಂಡರು.

ವೈದ್ಯರು, ‘ಊಟ ಮಾಡಲಷ್ಟೇ ಅವರು ಸಮರ್ಥರಾಗಿದ್ದಾರೆ. ಸಂಪೂರ್ಣವಾಗಿ ಗುಣಮುಖರಾಗಿಲ್ಲ. ಅಕ್ಷರಗಳನ್ನು ಸ್ಪಷ್ಟವಾಗಿ ಉಚ್ಛರಿಸು
ವುದಿಲ್ಲ. ಇಂಥ ಸಂದರ್ಭದಲ್ಲಿ ಹೇಳಿಕೆ ಪಡೆದರೆ ಗೊಂದಲಗಳು ಉಂಟಾಗುತ್ತವೆ. ಹೀಗಾಗಿ, ಆರೋಗ್ಯದಲ್ಲಿ ಚೇತರಿಕೆ ಬಂದ ಬಳಿಕ ನಾವೇ ತಿಳಿಸುತ್ತೇವೆ’ ಎಂದರು. ಅದಕ್ಕೆ ಒಪ್ಪಿದ ಪೊಲೀಸರು, ಮಧ್ಯಾಹ್ನ 1 ಗಂಟೆಗೆ ಆಸ್ಪತ್ರೆಯಿಂದ ಹೊರಟು ಹೋದರು.

‘ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಬಹುದು ಎಂದು ತಿಳಿದು ಆಸ್ಪತ್ರೆಗೆ ಹೋಗಿದ್ದೆವು. ಆದರೆ, ಹೇಳಿಕೆ ಸಿಗಲಿಲ್ಲ. ಕೆಲ ದಿನ ಬಿಟ್ಟು ಮತ್ತೆ ಹೋಗುತ್ತೇವೆ’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

ಡಿವಿಆರ್‌ ಮುಚ್ಚಿಟ್ಟಿದ್ದ ಕೆಫೆ ಸಿಬ್ಬಂದಿ: ಹಲ್ಲೆಯ ದೃಶ್ಯ ಸೆರೆಯಾಗಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದ ಡಿವಿಆರ್‌ ಅನ್ನು ಫರ್ಜಿ ಕೆಫೆ ಸಿಬ್ಬಂದಿ ಮುಚ್ಚಿಟ್ಟಿದ್ದರು.
ಅದರ ಬದಲು ಬೇರೆ ಡಿವಿಆರ್‌ ಅನ್ನು ಪೊಲೀಸರಿಗೆ ನೀಡಿದ್ದರು ಎಂಬುದನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಜಾಮೀನು ವಿಚಾರಣೆ ಮುಂದಕ್ಕೆ

ವಿದ್ವತ್‌ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಜೈಲು ಸೇರಿರುವ ಶಾಸಕ ಎನ್‌.ಎ. ಹ್ಯಾರಿಸ್ ಪುತ್ರ ಮೊಹಮದ್ ನಲಪಾಡ್ ಹಾಗೂ ಆತನ ಸಹಚರರ ಜಾಮೀನು ಅರ್ಜಿ ಸಂಬಂಧ 63ನೇ ಸೆಷನ್ಸ್‌ ನ್ಯಾಯಾಲಯ ಸೋಮವಾರ ವಾದ–‍ಪ್ರತಿವಾದ ಆಲಿಸಿತು. ಪ್ರಕರಣದ ವಿಚಾರಣೆಯನ್ನು ಮಂಗಳವಾರಕ್ಕೆ (ಫೆ.27) ಮುಂದೂಡಿತು.

ಘಟನೆ ನಡೆದ ಮರುದಿನವೇ ಕಬ್ಬನ್‌ ಪಾರ್ಕ್‌ ಪೊಲೀಸರು, ಕೆಫೆಗ ಹೋಗಿ ಡಿವಿಆರ್‌ ಕಲೆಹಾಕಿದ್ದರು. ಅದನ್ನೇ ಸಿಸಿಬಿ ಪೊಲೀಸರಿಗೆ ನೀಡಿದ್ದರು. ಅದರ ಪರಿಶೀಲನೆ ವೇಳೆ ಹಲ್ಲೆ ದೃಶ್ಯವಿಲ್ಲದಿರುವುದು ಗೊತ್ತಾಗಿದೆ. ಬಳಿಕವೇ ಪೊಲೀಸರು, ಕೆಫೆಗೆ ಹೋಗಿ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದರು. ಅದೇ ವೇಳೆ ಸಿಬ್ಬಂದಿ, ಮುಚ್ಚಿಟ್ಟಿದ್ದ ಡಿವಿಆರ್‌ ಕೊಟ್ಟಿರುವುದಾಗಿ ಮೂಲಗಳು ತಿಳಿಸಿವೆ. 

‘ಘಟನೆಗೆ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಗಳು ಪ್ರಮುಖ ಪುರಾವೆಗಳು. ಸದ್ಯ ಕಲೆಹಾಕಿದ ಎಲ್ಲ ಡಿವಿಆರ್‌ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಜತೆಗೆ ಡಿವಿಆರ್‌ ಮುಚ್ಚಿಟ್ಟಿದ್ದ ಆರೋಪದಡಿ ಕೆಫೆ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆ ನಡೆಸಿದ್ದೇವೆ’ ಎಂದು ಸಿಸಿಬಿ ಪೊಲೀಸರು ತಿಳಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.