ADVERTISEMENT

ಹೊಟ್ಟೆಯಲ್ಲೇ ಸಾವನ್ನಪ್ಪಿದ ಮಗು

ಜಿಲ್ಲಾ ಆಸ್ಪತ್ರೆಯಲ್ಲೇ ಗರ್ಭಿಣಿಗೆ ಸಿಗದ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2013, 19:56 IST
Last Updated 19 ಡಿಸೆಂಬರ್ 2013, 19:56 IST

ತುಮಕೂರು: ಜಿಲ್ಲಾ ಆಸ್ಪತ್ರೆಗೆ ಬಂದ ಗರ್ಭಿಣಿಗೆ ಚಿಕಿತ್ಸೆ ಸಿಗದೆ ಮಗು ಸಾವಿ­ಗೀಡಾದ ಘಟನೆ ಗುರುವಾರ ನಡೆದಿದೆ.
ಕೊರಟಗೆರೆ ತಾಲ್ಲೂಕು ಅಳಿಲು­ಘಟ್ಟದ ಗರ್ಭಿಣಿ ರಾಮಕ್ಕ ಗುರುವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಆಸ್ಪತ್ರೆಗೆ ಬಂದಿದ್ದಾರೆ.

ಆದರೆ ಆಸ್ಪತ್ರೆ­ಯಲ್ಲಿ ಅವರಿಗೆ ಚಿಕಿತ್ಸೆ ನೀಡಲು ಯಾರೂ ಮುಂದೆ ಬಂದಿಲ್ಲ. ಬೆಳಿಗ್ಗೆ 8 ಗಂಟೆಯವರೆಗೂ ಆಸ್ಪತ್ರೆ ಯಲ್ಲೇ ಒದ್ದಾಡಿದ್ದಾರೆ.
ಹೊಟ್ಟೆಯಲ್ಲಿ ಮಗುವಿನ ಚಲನೆ ನಿಂತ ಅನುಭವವಾಗಿ ಗರ್ಭಿಣಿ ಮನೆ­ಯವರು ಆಕೆಯನ್ನು ಖಾಸಗಿ ಡಯಾ­ಗ್ನೋಸ್ಟಿಕ್‌ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಸ್ಕ್ಯಾನ್‌ ಮಾಡಿಸಿದಾಗ ಮಗು ಸಾವಿಗೀಡಾಗಿರುವುದು ತಿಳಿದುಬಂದಿದೆ. ಇದರಿಂದ ಕಂಗಾಲಾದ ಗರ್ಭಿಣಿ ಕುಟುಂಬದ ನಾಲ್ಕೈದು ಮಂದಿ ಜಿಲ್ಲಾ ಆಸ್ಪತ್ರೆ ಮುಂದೆ ಶುಕ್ರವಾರ ಬೆಳಿಗ್ಗೆ ಧರಣಿ ಕುಳಿತರು.

ಧರಣಿಯಿಂದ ಕಂಗಾಲಾದ ಆಸ್ಪತ್ರೆ ಸಿಬ್ಬಂದಿ ಕೂಡಲೇ ರಾಮಕ್ಕ ಅವರನ್ನು ದಾಖಲಿಸಿಕೊಂಡರು.

ಸ್ಥಳಕ್ಕೆ ಬಂದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶ್ರೀಕಾಂತ್‌ ಬಾಸೂರ್ ಖಾಸಗಿ ಕೇಂದ್ರದಲ್ಲಿ ತೆಗೆಸಿಕೊಂಡು ಬಂದಿದ್ದ ಸ್ಕ್ಯಾನಿಂಗ್ ನೋಡಿ ಮಗು ಜಿಲ್ಲಾ ಆಸ್ಪತ್ರೆಯಲ್ಲಿ ಸಾವಿಗೀಡಾಗಿಲ್ಲ. ನಾಲ್ಕೈದು ದಿನದ ಹಿಂದೆಯೇ ಸಾವಿಗೀಡಾಗಿದೆ ಎಂದು ವರದಿ ಹೇಳುತ್ತಿದೆ ಎಂದು ಧರಣಿ ನಿರತರನ್ನು ಸಮಾಧಾನ ಪಡಿಸಿದರು.

ತೀರಾ ಕಡುಬಡವರಂತೆ ಕಂಡು­ಬರುತ್ತಿದ್ದ ಗರ್ಭಿಣಿ ಕುಟುಂಬದವರು ಬೇಗ ಸತ್ತ ಮಗುವಾದರೂ ಈಚೆ ತೆಗೆಯಿರಿ ಎಂದು ಅಂಗಲಾಚಿಸಿದರು. ಹನ್ನೊಂದು ಗಂಟೆ ಸುಮಾರಿಗೆ ಸತ್ತ ಮಗುವನ್ನು ಹೊರಗೆ ತೆಗೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.