ADVERTISEMENT

ಹೊಸಪೇಟೆ: ಭೂವಿವಾದದ ಹಿನ್ನಲೆ:ಸ್ವಸ್ತಿಕ್ ನಾಗರಾಜ ಕಚೇರಿ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 7 ಮೇ 2012, 19:30 IST
Last Updated 7 ಮೇ 2012, 19:30 IST

ಹೊಸಪೇಟೆ:ನಗರದ ಉದ್ಯಮಿ ಹಾಗೂ ನಗರಸಭಾ ಸದಸ್ಯ ಸ್ವಸ್ತಿಕ್ ನಾಗರಾಜ ಅವರ  ವಸತಿಗೃಹ ಹಾಗೂ ಕಚೇರಿಗಳ ಮೇಲೆ ಯುವಕರ ಗುಂಪೊಂದು ದಾಳಿ ಮಾಡಿ, ಆಸ್ತಿ ಹಾನಿಗೊಳಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಸುಮಾರು 50 ಯುವಕರ ಗುಂಪೊಂದು ಚಪ್ಪರದಹಳ್ಳಿ ಪ್ರದೇಶದಲ್ಲಿರುವ ಶ್ರೀಕೃಷ್ಣ ಟೂರಿಸ್ಟ್ ಹೋಮ್, ಡ್ಯಾಂ ರಸ್ತೆಯಲ್ಲಿರುವ ಸ್ವಸ್ಥಿಕ್ ಸ್ಟೀಲ್ಸ್ ಕಚೇರಿಯ ಮೇಲೆ ದಿಢೀರ್ ದಾಳಿ ಮಾಡಿ ಕಚೇರಿಯ ಪೀಠೋಪಕರಣಗಳು, ಒಳಾಂಗಣ ವಿನ್ಯಾಸವನ್ನು ಧ್ವಂಸಗೊಳಿಸಿದೆ. ಮತ್ತೊಂದಡೆ ಶ್ರೀಕಷ್ಣ ಟೂರಿಸ್ಟ್ ಹೋಮ್‌ನ ಸ್ವಾಗತ ಕೌಂಟರ್, ಪೀಠೋಪಕರಣಗಳು ಹಾಗೂ ಕಚೇರಿಯ ಇನ್ನಿತರೆ ಪರಿಕರಗಳನ್ನು ಧ್ವಂಸಗೊಳಿಸಿದ್ದಾರೆ.

ಭೂ ವಿವಾದದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ ಎನ್ನಲಾಗಿದ್ದು,  ತನ್ನ ಮೇಲೆ ಸಮಾಜದವರು ಹಲ್ಲೆ ಮಾಡಿದ್ದಾರೆ ಎಂದು ನಾಗರಾಜ ದೂರು ನೀಡಿದ್ದಾರೆ. ಆದರೆ ನಮ್ಮ ಮೇಲೆ ಅನಗತ್ಯವಾಗಿ ಆರೋಪ ಮಾಡುವ ಹಾಗೂ ತನ್ನ ಪ್ರಭಾವದ ಮೂಲಕ ಸುಳ್ಳು ದೂರು ನೀಡಿದ್ದಾರೆ ಎಂದು ಸಮಾಜದ ಮುಖಂಡರು ದೂರಿದ್ದಾರೆ.
 
ಅಲ್ಲದೆ ಗೊಂದಲಕ್ಕೆ ಕಾರಣವಾದ ಪೊಲೀಸ್ ಅಧಿಕಾರಿಯ ಮೇಲೆ ಸಹ  ಕ್ರಮ ಕೈಗೊಳ್ಳುವಂತೆ ಸಮಾಜದ ನೂರಾರು ಜನರು ಹೊಸಪೇಟೆ ನಗರ ಠಾಣೆಗೆ ರಾತ್ರಿ 8-30ಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಸ್ಥಳಕ್ಕೆ ಆಗಮಿಸಿದ ಶಾಸಕ ಆನಂದಸಿಂಗ್ ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಲು ಹರಸಾಹಸ ಪಡುತ್ತಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.