ADVERTISEMENT

ಹೋಂ ಸ್ಟೇ ದಾಳಿ: ಮತ್ತೆ ನಾಲ್ವರ ಸೆರೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2012, 19:30 IST
Last Updated 10 ಅಕ್ಟೋಬರ್ 2012, 19:30 IST

ಮಂಗಳೂರು: ನಗರದ ಹೊರವಲಯದ ಪಡೀಲ್‌ನ`ಮಾರ್ನಿಂಗ್ ಮಿಸ್ಟ್~ ಹೋಂ ಸ್ಟೇನಲ್ಲಿ ಹುಟ್ಟು ಹಬ್ಬ ಆಚರಿಸುತ್ತಿದ್ದ ಯುವಕ- ಯುವತಿಯರ ಮೇಲೆ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ನಡೆದ ಹಲ್ಲೆ ಪ್ರಕರಣ ಸಂಬಂಧ ಪೊಲೀಸರು ಮತ್ತೆ ನಾಲ್ವರು ಆರೋಪಿಗಳನ್ನು ಬುಧವಾರ ಬಂಧಿಸಿದ್ದಾರೆ.

ಪಡೀಲ್‌ನ ಗಣೇಶ್ (22), ಶೈಲೇಶ್ (20), ದೀಕ್ಷಿತ್ (20) ಹಾಗೂ ಪುತ್ತೂರು ನಿವಾಸಿ ಕಿರಣ್ (30) ಬಂಧಿತರು. ಆರೋಪಿಗಳು ತಲೆಮರೆಸಿಕೊಂಡು ತಿರುಗಾಡುತ್ತಿದ್ದರು. ಗಣೇಶ್, ಶೈಲೇಶ್ ಹಾಗೂ ದೀಕ್ಷಿತ್‌ರನ್ನು ಪಡೀಲ್‌ನಲ್ಲಿ ಹಾಗೂ ಕಿರಣ್‌ನನ್ನು ಕಾಸರಗೋಡಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜು.28ರಂದು ನಡೆದ ಯುವತಿಯರ ಮೇಲೆ ನಡೆದ ಅಮಾನವೀಯ ಹಲ್ಲೆಯಿಂದಾಗಿ ಈ ಪ್ರಕರಣ ರಾಷ್ಟ್ರದಾದ್ಯಂತ ಗಮನ ಸೆಳೆದಿತ್ತು.  ಈ ಸಂಬಂಧ ಇದುವರೆಗೆ 28 ಆರೋಪಿಗಳನ್ನು ಬಂಧಿಸಿದಂತಾಗಿದೆ.

ವರದಿಗಾರರಿಗೆ ವಾರೆಂಟ್:
ಪಡೀಲ್ ಹೋಂ ಸ್ಟೇನಲ್ಲಿ ಯುವಕ-ಯುವತಿಯರ ಮೇಲೆ ನಡೆದ ಹಲ್ಲೆಯ ದೃಶ್ಯವನ್ನು ಚಿತ್ರೀಕರಿಸಿದ ಕಸ್ತೂರಿ ಟಿ.ವಿ ವಾಹಿನಿಯ ವರದಿಗಾರ ನವೀನ್ ಸೂರಿಂಜೆ ಹಾಗೂ ಸಹಾಯ ಟಿವಿ ಕ್ಯಾಮೆರಾಮನ್ ಚರಣ್ ಅವರ ಬಂಧನಕ್ಕೂ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

`ನ್ಯಾಯಾಲಯ ನಮ್ಮ ಬಂಧನಕ್ಕೆ ಆದೇಶ ಹೊರಡಿಸಿದ ವಿಷಯ ತಿಳಿದಿದೆ.  ವಕೀಲ ಸತೀಶ್ ಬಂಟ್ವಾಳ್ ಮೂಲಕ ನ್ಯಾಯಾಲಯಕ್ಕೆ ಜಾಮೀನಿಗಾಗಿ ಅರ್ಜಿ ಸಲ್ಲಿಸ್ದ್ದಿದೇನೆ~ ಎಂದು ಕಸ್ತೂರಿ ಟಿ.ವಿಯ ವರದಿಗಾರ ನವೀನ್ ಸೂರಿಂಜೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.