ADVERTISEMENT

ಹೋರಾಟ ಮರೆತ ಕಾಂಗ್ರೆಸ್‌: ಕಾಗೋಡು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2013, 19:30 IST
Last Updated 21 ಡಿಸೆಂಬರ್ 2013, 19:30 IST

ಶಿವಮೊಗ್ಗ: ಕಾಂಗ್ರೆಸ್‌ ಇಂದು ತನ್ನ ಹೋರಾಟ ಮರೆತಿದೆ. ಅದು ಉಳಿದು­ಕೊಂಡಿ­ರುವುದು ತನ್ನ ಪರಂಪರೆಯಿಂದ ಹೊರತು ಸಂಘಟನಾ ಶಕ್ತಿ­ಯಿಂದ ಅಲ್ಲ. ಇಡೀ ರಾಷ್ಟ್ರದಲ್ಲಿ ಬದಲಾವಣೆ ಶಕ್ತಿ ಇರುವುದು ರೈತರಿಗೆ. ಅವರಿಗೆ ಅಧಿಕಾರ ಸಿಕ್ಕರೆ ಈ ವ್ಯವಸ್ಥೆಯಲ್ಲಿ ಸ್ವಲ್ಪ ಬದಲಾ­ವಣೆ ಕಾಣಲು ಸಾಧ್ಯ ಎಂದು ವಿಧಾನ-­ಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಪ್ರೊ.ನಂಜುಂಡ­ಸ್ವಾಮಿ ರಾಜಕೀ­ಯೇತರ ಬಣ) ಹಮ್ಮಿಕೊಂಡಿದ್ದ ರೈತ ಮುಖಂಡ ಎನ್‌.ಡಿ.ಸುಂದರೇಶ್‌ರವರ 21ನೇ ಸ್ಮರಣೆ ಮತ್ತು ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದು ರಾಜ­ಕಾರಣ ದಿಕ್ಕು ತಪ್ಪಿದೆ. ತತ್ವಬದ್ಧ ರಾಜ­ಕಾರಣ ಇಲ್ಲ­ವಾಗಿದೆ. ದುಡ್ಡು ಮಾಡು­ವುದೇ ದಂಧೆಯಾಗಿದೆ. ಒಟ್ಟಾರೆ ರಾಜ­ಕೀ­ಯವೇ ಜಿಗುಪ್ಸೆಯಾಗಿದೆ. ಬದಲಾವಣೆ ಸಾಧ್ಯವಾಗುವುದಿಲ್ಲವೆಂದು ಅನಿಸುತ್ತಿದೆ ಎಂದರು.

ಪ್ರಸ್ತುತ ಆಡಳಿತ ಸುಧಾರಣೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಒಂದೊಂದು ಕಡತ ಮತ್ತೊಂದು ಟೇಬಲ್‌ಗೆ ಹೋಗಲು ಕನಿಷ್ಠ ಮೂರು ತಿಂಗಳು ಬೇಕಾಗುತ್ತದೆ. ಸರ್ಕಾರ, ಕಡತ ವಿಲೇವಾರಿ ವಿಳಂಬ ಮಾಡುವ ಇಲಾಖೆ  ಕಾರ್ಯದರ್ಶಿಗಳಿಗೆ ನೋಟಿಸ್‌ ಹಾಗೂ ದಂಡ ವಿಧಿಸಲು ಆರಂಭಿಸಿದೆ. ಈ ಪದ್ಧತಿ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿಗೂ ವಿಸ್ತರಿಸಬೇಕು ಎಂದು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.